ಕಾನ್ಪುರ : ಪೋಷಕರ ತೀವ್ರ ವಿರೋಧದ ನಡುವೆಯೂ ಪ್ರೇಮ ವಿವಾಹ ಮಾಡಿಕೊಂಡಿದ್ದ ಯುವತಿ, ಮದುವೆಯಾಗಿ ಕೇವಲ ನಾಲ್ಕು ತಿಂಗಳಲ್ಲೇ ಪತಿಯ ಕೈಯಲ್ಲೇ ಭೀಕರವಾಗಿ ಹತ್ಯೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಶ್ವೇತಾ ಸಿಂಗ್ ಎಂದು ಗುರುತಿಸಲಾಗಿದ್ದು, ಪತಿ ಸಚಿನ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸಚಿನ್ ಮತ್ತು ಶ್ವೇತಾ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ನ್ಯಾಯಾಲಯದಲ್ಲಿ ಮದುವೆಯನ್ನು ನೋಂದಾಯಿಸಿಕೊಂಡಿದ್ದರು. ಮದುವೆಯ ನಂತರ ಕಳೆದ ಒಂದು ತಿಂಗಳಿನಿಂದ ಮಹಾರಾಜಪುರ ಪ್ರದೇಶದ ಎಂಜಿನಿಯರಿಂಗ್ ಕಾಲೇಜು ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ ಮದುವೆಯ ಕೆಲವೇ ದಿನಗಳಲ್ಲಿ ದಂಪತಿ ನಡುವೆ ಅನುಮಾನ ಮತ್ತು ಕಲಹಗಳು ಆರಂಭವಾಗಿದ್ದವು.
ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಸಚಿನ್, ತನ್ನ ಪತ್ನಿಯ ನಡವಳಿಕೆ ಕುರಿತು ಶಂಕೆ ಮೂಡಿತ್ತು ಎಂದು ತಿಳಿಸಿದ್ದಾರೆ. ತಾನು ಕೆಲಸಕ್ಕೆ ಹೊರಗಿದ್ದ ಸಮಯದಲ್ಲಿ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗೆ ಶ್ವೇತಾ ಸಿಂಗ್ ಆಪ್ತ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನವಿತ್ತು ಎಂದು ಆರೋಪಿಸಿದ್ದಾನೆ. ಎರಡು ದಿನಗಳ ಹಿಂದೆ ಹಳ್ಳಿಗೆ ಹೋಗುತ್ತಿದ್ದೇನೆ ಎಂದು ಪತ್ನಿಗೆ ತಿಳಿಸಿ ಮನೆ ಬಿಟ್ಟಿದ್ದ ಸಚಿನ್, ಅದೇ ರಾತ್ರಿ ಅನಿರೀಕ್ಷಿತವಾಗಿ ಮನೆಗೆ ಹಿಂತಿರುಗಿದ್ದಾನೆ.
ರಾತ್ರಿ ಮನೆಗೆ ಬಂದಾಗ, ತನ್ನ ಪತ್ನಿ ಇಬ್ಬರು ಪುರುಷರೊಂದಿಗೆ ಹಾಸಿಗೆಯ ಮೇಲೆ ಮಲಗಿದ್ದುದನ್ನು ಕಂಡು ತೀವ್ರ ಆಘಾತಕ್ಕೊಳಗಾದೆ ಎಂದು ಸಚಿನ್ ಹೇಳಿಕೊಂಡಿದ್ದಾನೆ. ಈ ದೃಶ್ಯವನ್ನು ಮೊಬೈಲ್ ಫೋನ್ನಲ್ಲಿ ವೀಡಿಯೊ ದಾಖಲಿಸಲು ಯತ್ನಿಸಿದಾಗ, ಆ ಇಬ್ಬರು ಪುರುಷರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾನೆ. ಈ ವಿಚಾರವಾಗಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಎಲ್ಲರನ್ನೂ ಠಾಣೆಗೆ ಕರೆದುಕೊಂಡು ಹೋಗಿದ್ದರು.
ಆದರೆ ಠಾಣೆಯಲ್ಲಿ ಸಚಿನ್, ಈ ವಿಷಯವನ್ನು ಮುಂದುವರೆಸಲು ತಾನು ಇಚ್ಛಿಸುವುದಿಲ್ಲ, ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುತ್ತೇನೆ ಎಂದು ಹೇಳಿ ಮನೆಗೆ ಮರಳಿದ್ದಾನೆ. ಮನೆಗೆ ಹಿಂದಿರುಗಿದ ಬಳಿಕ, ಶ್ವೇತಾ ತನ್ನನ್ನು ಬಿಟ್ಟು ಆ ಇಬ್ಬರೊಂದಿಗೆ ವಾಸಿಸುವುದಾಗಿ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದ್ದು, ಇದರಿಂದ ದಂಪತಿ ನಡುವೆ ತೀವ್ರ ಜಗಳ ನಡೆದಿದೆ.
ಜಗಳ ತಾರಕಕ್ಕೇರಿದ ಸಂದರ್ಭದಲ್ಲಿ ಕೋಪದ ಭರದಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದಿರುವುದಾಗಿ ಸಚಿನ್ ಪೊಲೀಸರಿಗೆ ಒಪ್ಪಿಕೊಂಡಿದ್ದಾನೆ. ಹತ್ಯೆಯ ನಂತರ ಶ್ವೇತಾ ಸಿಂಗ್ ಅವರ ಮೃತದೇಹವನ್ನು ಕಂಬಳಿಯಲ್ಲಿ ಸುತ್ತಿ ಬಾಡಿಗೆ ಕೋಣೆಯಲ್ಲೇ ಬಿಟ್ಟು ಹೋಗಿದ್ದಾನೆ. ಮರುದಿನ ಬೆಳಿಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ತಾನೇ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಂಬಳಿಯಲ್ಲಿ ಸುತ್ತಲಾಗಿದ್ದ ಶವವನ್ನು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ. ಮೃತದೇಹದ ಪ್ರಾಥಮಿಕ ಪರಿಶೀಲನೆ ಪೂರ್ಣಗೊಂಡಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಎಲ್ಲಾ ಆರೋಪಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.










