ಹಾಸನ, ಜುಲೈ 08, 2025: ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವುಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಸರ್ಕಾರದ ವೈಫಲ್ಯವನ್ನು ಖಂಡಿಸಿ, ತುರ್ತು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಹಿಮ್ಸ್ ಆಸ್ಪತ್ರೆ ವೈದ್ಯರೊಂದಿಗೆ ಜೆಡಿಎಸ್ ಶಾಸಕರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ಆಗ್ರಹಿಸಿರುವ ಅವರು, ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ಕೊರತೆಗಳ ಬಗ್ಗೆ ಅಸಮಾಧಾನ ಹೊರಹಾಕಿದರು.
“ರಾಜ್ಯದಲ್ಲಿ ಪ್ರತಿನಿತ್ಯ ಹೃದಯಾಘಾತದಿಂದ ಜನ ಸಾಯುತ್ತಿದ್ದಾರೆ. ಜನ ಗಾಬರಿಯಲ್ಲಿದ್ದಾರೆ, ಆಸ್ಪತ್ರೆಗಳಲ್ಲಿ ಜನದಟ್ಟಣೆಯಾಗಿದೆ. ಖಾಸಗಿ ಆಸ್ಪತ್ರೆಗಳು ಬಡವರಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿವೆ. ಈ ಜಿಲ್ಲೆಯಲ್ಲಿ ಯಾಕಿಷ್ಟು ಸಾವು? ಸರ್ಕಾರ ಕೂಡಲೇ ಒಂದು ಮೆಗಾ ಹೃದಯ ತಪಾಸಣಾ ಕ್ಯಾಂಪ್ ಆಯೋಜಿಸಬೇಕು. ಇಲ್ಲವಾದರೆ ನಾವೇ ಹಣ ಹಾಕಿ ಮೆಗಾ ಹೆಲ್ತ್ ಕ್ಯಾಂಪ್ ಮಾಡುತ್ತೇವೆ ,” ಎಂದು ರೇವಣ್ಣ ಹೇಳಿದರು.
ಸರ್ಕಾರ ಈಗಾಗಲೇ ಒಂದು ಕಮಿಟಿ ರಚಿಸಿದ್ದು, ತಾವು ಕೆಲವು ಸಲಹೆಗಳನ್ನು ನೀಡಿರುವುದಾಗಿ ತಿಳಿಸಿದ ಅವರು, ಜಿಲ್ಲಾಧಿಕಾರಿಗಳು ಸಿಎಸ್ಆರ್ ಫಂಡ್ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. “ನೂತನ ಆಸ್ಪತ್ರೆಗೆ 9 ಕೋಟಿ ರೂ. ಬಿಡುಗಡೆ ಮಾಡಿ, ಪಿಎಚ್ಸಿ ಮತ್ತು ಸಿಎಚ್ಸಿಗಳಲ್ಲಿ ಇಸಿಜಿ, ಬಿಪಿ, ಶುಗರ್ ಪರೀಕ್ಷೆಗೆ ಸೌಲಭ್ಯ ಕಲ್ಪಿಸಬೇಕು. ಆರೋಗ್ಯ ಇಲಾಖೆಯಲ್ಲಿ 40% ಹುದ್ದೆಗಳು ಖಾಲಿಯಿವೆ. ಕೂಡಲೇ ತಾಲ್ಲೂಕು ಆಸ್ಪತ್ರೆಗಳಿಗೆ ಸೌಕರ್ಯ ಒದಗಿಸಿ,” ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಕೇವಲ ಒಬ್ಬ ಹೃದ್ರೋಗ ತಜ್ಞರಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು “ಗುತ್ತಿಗೆ ಆಧಾರದ ಮೇಲೆ ಹೃದ್ರೋಗ ತಜ್ಞರನ್ನು ನೇಮಕ ಮಾಡಬೇಕು. ಜಯದೇವ ಆಸ್ಪತ್ರೆಯ ರೀತಿಯಲ್ಲಿ ಜಿಲ್ಲೆಯಲ್ಲಿ ಒಂದು ಯೂನಿಟ್ ಸ್ಥಾಪಿಸಬೇಕು. ಬಿಪಿಎಲ್ ಕಾರ್ಡ್ದಾರರಿಗೆ ಯಾವುದೇ ಶುಲ್ಕ ವಿಧಿಸಬಾರದು,” ಎಂದು ಒತ್ತಾಯಿಸಿದರು.
“ಕೆಲವರು ಗಾಬರಿಯಿಂದಲೇ ಸಾಯುತ್ತಿದ್ದಾರೆ. ಸರ್ಕಾರಕ್ಕೆ ಮೆಗಾ ಕ್ಯಾಂಪ್ ಮಾಡಲು ಆಗದಿದ್ದರೆ, ನಾವೇ ಹಣ ಹಾಕಿ ಕ್ಯಾಂಪ್ ಆಯೋಜಿಸುತ್ತೇವೆ. ಜಿಲ್ಲೆಯ ಜನ ಸಂಕಷ್ಟದಲ್ಲಿದ್ದಾರೆ. 5-10 ಕೋಟಿ ರೂ. ಬಿಡುಗಡೆ ಮಾಡಿ ಸೌಲಭ್ಯ ಕಲ್ಪಿಸಬೇಕು,” ಎಂದು ರೇವಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.










