
Mysore,ಮೈಸೂರು,ಮೇ,19,2026(www.kannadapost.com): ದುಬಾರೆ ಆನೆ ಶಿಬಿರದಲ್ಲಿ ಕಂಜನ್ ಆನೆ ದಾಳಿ ನಡೆಸಿದ ಘಟನೆ ಕುರಿತು ಮೈಸೂರಿನಲ್ಲಿ ಆನೆ ವೈದ್ಯ ಡಾ. ನಾಗರಾಜ್ ಪ್ರತಿಕ್ರಿಯೆ ನೀಡಿದ್ದು, “ಯಾವುದೇ ಪ್ರಾಣಿಯ ಸ್ವಭಾವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. 2014ರಲ್ಲಿ ಕಂಜನ್ ಆನೆಯನ್ನು ಸೆರೆ ಹಿಡಿಯಲಾಗಿದ್ದು, ಆ ಬಳಿಕ ಸಾಕಾಣಿಕೆ ಹಾಗೂ ತರಬೇತಿಯಲ್ಲಿ ಇತ್ತು. ಆದರೆ ಆನೆಗಳ ಸ್ವಭಾವ ಒಂದಕ್ಕೊಂದು ಭಿನ್ನವಾಗಿರುತ್ತದೆ.
ಕೆಲವು ಆನೆಗಳು ತುಂಟತನದಿಂದ ವರ್ತಿಸಿದರೆ, ಇನ್ನೂ ಕೆಲವು ಒರಟು ಸ್ವಭಾವ ಹೊಂದಿರುತ್ತವೆ ಎಂದು ಅವರು ವಿವರಿಸಿದರು. “ಮನುಷ್ಯರೇ ಕ್ಷಣಕ್ಷಣಕ್ಕೂ ಬದಲಾಗುತ್ತಾರೆ. ಹಾಗಿರುವಾಗ ಪ್ರಾಣಿಗಳ ಮನಸ್ಥಿತಿಯನ್ನು ನಿಖರವಾಗಿ ಅಂದಾಜಿಸುವುದು ಕಷ್ಟ. ನೆನ್ನೆ ನಡೆದ ಘಟನೆ ಬಹಳ ದುಃಖಕರ ಮತ್ತು ಘೋರ ದುರಂತ,” ಎಂದು ಬೇಸರ ವ್ಯಕ್ತಪಡಿಸಿದರು. ಘಟನೆಯ ಕುರಿತು ಮಾತನಾಡಿದ ಅವರು, “ಕಾಲಿಗೆ ಏನೋ ತಾಗಿದ್ದರಿಂದ ಆನೆ ರಿಯಾಕ್ಟ್ ಆಗಿರಬಹುದು. ಆದರೆ ದಾಳಿಗೆ ಇದೇ ಕಾರಣ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಆಹಾರ ನೀಡುವ ಸಂದರ್ಭಗಳಲ್ಲಿ ಆನೆಗಳು ಮುದ್ದಾಡುವುದು, ಅಕ್ಕಿ ತಿನ್ನುವಾಗ ತಿವಿಯುವುದು ಸಹಜ. ಆದರೆ ಈ ಘಟನೆ ಹೇಗೆ ನಡೆದಿದೆ ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸುವುದು ಕಷ್ಟ,” ಎಂದರು. ಆನೆಗಳ ಸಮೀಪ ಹೋಗುವುದು ಅಪಾಯಕಾರಿಯೆಂದು ಎಚ್ಚರಿಕೆ ನೀಡಿದ ಡಾ. ನಾಗರಾಜ್, “ಆನೆಗಳ ಬಳಿ ಹೋಗಿ ಫೋಟೋ ಕ್ಲಿಕ್ಕಿಸುವುದು, ಆಹಾರ ನೀಡುವುದು ಸರಿಯಲ್ಲ. ಈ ಬಗ್ಗೆ ಸರ್ಕಾರ ಹೊರಡಿಸಿರುವ ಆದೇಶ ಸಮಂಜಸವಾಗಿದೆ,” ಎಂದು ಹೇಳಿದರು. ದಾಳಿಯ ವೇಳೆ ವ್ಯಕ್ತಿ ನೀರಿನೊಳಗೆ ಬಿದ್ದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಅವರು ತಿಳಿಸಿದರು.

“ಒಂದು ವೇಳೆ ಆತ ನಿಂತ ಸ್ಥಿತಿಯಲ್ಲಿದ್ದರೆ ಪರಿಣಾಮ ಮತ್ತಷ್ಟು ಗಂಭೀರವಾಗಬಹುದಿತ್ತು. ಕಂಜನ್ಗಿಂತ ಮಕ್ಣ ಆನೆಗಳು ಹೆಚ್ಚು ಬಲಶಾಲಿಯಾಗಿರುತ್ತವೆ,” ಎಂದರು. ಇದೇ ವೇಳೆ ಪ್ರಸಿದ್ಧ ದಸರಾ ಆನೆ ಅರ್ಜುನ ಕುರಿತು ಉಲ್ಲೇಖಿಸಿದ ಅವರು, “ಕಂಜನ್ಗಿಂತ ಅರ್ಜುನ ಹೆಚ್ಚು ಕೋಪಿಷ್ಠ ಸ್ವಭಾವದ ಆನೆ ಆಗಿತ್ತು. ಹಲವಾರು ಬಾರಿ ಅದನ್ನು ಸಮಾಧಾನಪಡಿಸುವುದೇ ಕಷ್ಟವಾಗುತ್ತಿತ್ತು. ವಿಶೇಷವಾಗಿ ಮದ ಬಂದ ಸಂದರ್ಭಗಳಲ್ಲಿ ಆನೆಗಳು ತೀವ್ರವಾಗಿ ಪ್ರತಿಕ್ರಿಯಿಸುವುದು ಸಹಜ,” ಎಂದು ಹೇಳಿದರು. “ಆನೆಗಳ ಮನಸ್ಥಿತಿ ಮತ್ತು ಪರಿಸ್ಥಿತಿಯನ್ನು ಅರಿತು ನಡೆದುಕೊಂಡರೆ ಇಂತಹ ಘಟನೆಗಳನ್ನು ತಪ್ಪಿಸಬಹುದು,” ಎಂದು ವೈದ್ಯಾಧಿಕಾರಿ ಡಾ. ನಾಗರಾಜ್ ಸಲಹೆ ನೀಡಿದರು.









