
vijayapura ವಿಜಯಪುರ ಜಿಲ್ಲೆಯ ತಿಕೋಟ ಭಾಗದಲ್ಲಿ ಇಂದು ಬೆಳಿಗ್ಗೆ ಭಾರೀ ಸ್ಫೋಟದ ಶಬ್ಧದೊಂದಿಗೆ ಭೂಕಂಪನ ಅನುಭವವಾಗಿದೆ. ಹಲವು ಗ್ರಾಮಗಳಲ್ಲಿ ಜನರು ಆತಂಕಗೊಂಡು ಮನೆಗಳಿಂದ ಹೊರಗೆ ಓಡಿ ಬಂದ ಘಟನೆ ನಡೆದಿದೆ.
ವಿಜಯಪುರ,ಮೇ,19,2026(www.kannadapost.com): ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಆತಂಕ ಮತ್ತೆ ಜನರನ್ನು ಬೆಚ್ಚಿಬೀಳಿಸಿದೆ. ಇಂದು ಬೆಳಿಗ್ಗೆ ತಿಕೋಟ ಭಾಗದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಗೊಂಡಿದ್ದಾರೆ.ಸುಮಾರು ಬೆಳಿಗ್ಗೆ 11.26ರ ವೇಳೆಗೆ ಏಕಾಏಕಿ ಭಾರೀ ಶಬ್ಧ ಕೇಳಿಬಂದಿದ್ದು, ಅದರ ಬೆನ್ನಲ್ಲೇ ಭೂಮಿ ನಡುಗಿದ ಅನುಭವವಾಗಿದೆ ಎಂದು ಸ್ಥಳೀಯರು ತಮಗಾದ ಅನುಭವ ಹಂಚಿಕೊಂಡಿದ್ದಾರೆ. ಸ್ಪೋಟದ ರೀತಿಯಲ್ಲಿ ಶಬ್ಧ ಕೇಳಿಬಂದ ಬಳಿಕ ಕೆಲ ಕ್ಷಣಗಳ ಕಾಲ ಕಂಪನ ಅನುಭವವಾಗಿದೆ ಎನ್ನಲಾಗಿದೆ.
ಎಲ್ಲೆಲ್ಲಿ ಭೂಕಂಪನದ ಅನುಭವ? ತಿಕೋಟ ತಾಲೂಕಿನ ಘೋಣಸಗಿ, ಕಳ್ಳವಟಗಿ, ಬಾಬಾನಗರ, ಬಿಜ್ಜರಗಿ, ಸೋಮದೇವರಟ್ಟಿ ಹಾಗೂ ಮಲಕನದೇವರಟ್ಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಕಂಪನ ಅನುಭವವಾಗಿದೆ. ಭೂಮಿ ಕಂಪಿಸಿದ ಅನುಭವದಿಂದ ಜನರು ತಕ್ಷಣ ಮನೆಗಳಿಂದ ಹೊರಗೆ ಓಡಿ ಬಂದು ಆತಂಕದಲ್ಲಿ ಕಾಲ ಕಳೆದರು.
ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ಇನ್ನಷ್ಟೇ ಮಾಹಿತಿ ಇಲ್ಲ.ವಿಜಯಪುರ ಜಿಲ್ಲೆಯಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಿಂದ ಆಗಾಗ ಭೂಕಂಪನದ ಅನುಭವವಾಗುತ್ತಿದ್ದು, ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಳೆದ ತಿಂಗಳಲ್ಲೂ ಈ ರೀತಿಯ ಕಂಪನಗಳು ಸಂಭವಿಸಿದ್ದವು. ಆದರೆ ಪದೇಪದೆ ಈ ಭಾಗದಲ್ಲಿ ಭೂಕಂಪನ ಅನುಭವಗಳಾಗುತ್ತಿರುವ ಹಿನ್ನೆಲೆ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಲ್ಲೇ ದಿನದೂಡುವಂತಾಗಿದೆ









