ಹಾಸನ: ಅರಕಲಗೂಡು ತಾಲ್ಲೂಕಿನ ಕಟ್ಟೆಪುರ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಕಟ್ಟೆಪುರದ ಕೃಷ್ಣರಾಜ ಅಣೆಕಟ್ಟೆಯ ಕಾವೇರಿ ನದಿದಡದಲ್ಲಿ ಮೊಸಳೆ ಕಂಡುಬಂದಿದ್ದು, ಇಲ್ಲಿ ಪ್ರತಿನಿತ್ಯ ಬಟ್ಟೆ–ಪಾತ್ರೆ ತೊಳೆಯುವ ಮಹಿಳೆಯರು ಹಾಗೂ ಜಾನುವಾರುಗಳಿಗೆ ನೀರು ಕುಡಿಸುವ ರೈತರು ಆತಂಕಗೊಂಡಿದ್ದಾರೆ. ಅಣೆಕಟ್ಟೆ ಸಮೀಪದಲ್ಲಿರುವ ಜಲವಿದ್ಯುತ್ ಘಟಕ ಕೂಡ ನದಿದಡಕ್ಕೆ ಅತಿ ಹತ್ತಿರವಿದ್ದು, ಹೆಚ್ಚಿನ ಎಚ್ಚರಿಕೆಯ ಅಗತ್ಯವಾಗಿದೆ.
ಸಾರ್ವಜನಿಕರು ಮೊಸಳೆಯನ್ನು ನೋಡಿ ಗಲಿಬಿಲಿಗೊಂಡ ವೇಳೆ, ಜನರ ಶಬ್ಧ ಕೇಳುತ್ತಿದ್ದಂತೆ ಮೊಸಳೆ ಮತ್ತೆ ನದಿಯೊಳಗೆ ಮರೆಯಾಗಿದೆಯೆಂಬ ಮಾಹಿತಿ ಲಭ್ಯವಾಗಿದೆ.
ಗ್ರಾಮಸ್ಥರು ಸಂಬಂಧಿತ ಇಲಾಖೆಯವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.










