ಅರಕಲಗೂಡು: ಯುವಕರು ಕೃಷಿಯಿಂದ ವಿಮುಖರಾಗಬೇಕಿಲ್ಲ, ಅಲ್ಲದೇ ಕೃಷಿ ಭೂಮಿಗಳು ವ್ಯಾಪಕವಾಗಿ ಕೈಗಾರಿಕೆಗಳ ಪಾಲಾಗುವ ಅಪಾಯವಿದ್ದು ಈ ಕುರಿತು ರೈತರು ಎಚ್ಚರ ವಹಿಸಬೇಕು ಎಂದು ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಕೆ.ಟಿ. ಗಂಗಾಧರ್ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ರೈತ ದಸರಾ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಯನ್ನೆ ನಂಬಿ ಬದುಕುತ್ತಿರುವ ರೈತರು ಬೀದಿಗೆ ಬೀಳದಂತೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಅಗತ್ಯವಿದೆ ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ವಹಿಸಬೇಕು, ರೈತರು ಇಂದಿನ ಕಾಲಮಾನಕ್ಕೆ ತಕ್ಕಂತೆ ಬೆಳೆಗಳನ್ನು ಬೆಳೆಸಬೇಕಾದ ಅಗತ್ಯವಿದ್ದು ಗುಣಮಟ್ಟದ ಬೆಳೆ ಬೆಳೆಸುವುದು ಅವಶ್ಯ.ರೈತರು ಸಾಲದ ಒತ್ತಡದಲ್ಲಿ ನರಳಬೇಕಾದ ಪರಿಸ್ಥಿತಿ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎ.ಮಂಜು, ಎಂದಿನ ದಿನಗಳಲ್ಲಿ ಕೃಷಿಕರು ಹಲವು ಸಂಕಷ್ಟಗಳಿಗೆ ಸಿಲುಕಿ ಬಳಲುವಂತಾಗಿದೆ, ಕೃಷಿ ರೈತನ ಕೈ ಕಚ್ಚುತ್ತಿದ್ದು ಹೈನುಗಾರಿಕೆ, ಕೋಳಿ ಕುರಿ ಸಾಕಾಣಿಕೆಯಂತಹ ಉಪಕಸುಬುಗಳಿಂದ ರೈತರು ಬದುಕು ಸಾಗಿಸುತ್ತಿದ್ದಾರೆ. ಶಿಕ್ಷಣವೇ ಬದಲಾವಣೆಗೆ ದಾರಿಯಾಗಿದ್ದು ರೈತರು ತಮ್ಮ ಮಕ್ಕಳನ್ನು ವಿದ್ಯಾವಂತರಾಗಿ ಮಾಡಬೇಕು ಎಂದರು.
ಮುದ್ದೆ ಊಟದ ಸ್ಫರ್ಧೆಯನ್ನು ಸ್ಫರ್ಧಿಗಳಿಗೆ ಊಟ ಬಡಿಸುವ ಮೂಲಕ ಚಾಲನೆ ನೀಡಿದ ಸಂಸದ ಶ್ರೇಯಸ್ ಎಂ ಪಟೇಲ್ ಅರಕಲಗೂಡಿನಲ್ಲಿ ವಿಶಿಷ್ಟವಾಗಿ ನಡೆಯುವ ದಸರಾ ಜಿಲ್ಲಾದ್ಯಂತ ಗಮನ ಸೆಳೆದಿದೆ.
ನಾಡಹಬ್ಬವನ್ನು ವೀಶೇಷ ರೀತಿಯಲ್ಲಿ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು. ಬನ್ನಿ ಮಂಟಪದಿಂದ ಕಾರ್ಯಕ್ರಮದ ವೇದಿಕೆ ವರೆಗೆ ಎತ್ತಿನ ಗಾಡಿ ಜಾಥಾ ನಡೆಯಿತು. ರಾಸುಗಳು,ಕೋಳಿ, ಕುರಿ, ಶ್ವಾನ, ಹಣ್ಣು, ತರಕಾರಿ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್, ಉಪಾಧ್ಯಕ್ಷ ಸುಬಾನ್ ಷರೀಪ್, ತಹಸಿಲ್ದಾರ್ ಕೆ.ಸಿ. ಸೌಮ್ಯ, ಗ್ರೇಡ್ -೨ ತಹಸೀಲ್ದಾರ್ ಸಿ. ಸ್ವಾಮಿ, ಸಹಾಯಕ ಕೃಷಿ ನಿರ್ದೇಶಕಿ ಕೆ.ಜೆ. ಕವಿತಾ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಿ. ರಾಜೇಶ್, ಮುಖಂಡರಾದ ನರಸೇಗೌಡ, ಮಂಜು ಶೆಟ್ಟಿಗೌಡ, ಗೋಪಾಲ್, ರೈತ ಮಹಿಳೆ ಕಮಲಮ್ಮ, ದಿವಾಕರ್ ಗೌಡ, ನಿರಂಜನ್, ರೈತ ಸಂಘದ ಮುಖಂಡರಾದ ಭುವನೇಶ್, ದಿನೇಶ್, ಜಗದೀಶ್, ಹರಳಹಳ್ಳಿ ತಮ್ಮೇಗೌಡ ಇತರರಿದ್ದರು. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ರಾಗಿ ಮುದ್ದೆ ಊಟದ ಸ್ಫರ್ಧೆ ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.










