ಸಕಲೇಶಪುರ : ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಆಶ್ರಯದಲ್ಲಿ ಅಕ್ಟೋಬರ್ 1ರಂದು 11ನೇ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಹಬ್ಬದ ರೀತಿಯಲ್ಲಿ ಸಂತಸ ಸಡಗರದಿಂದ ಆಚರಿಸಲು ಸಜ್ಜಾಗಿದೆ ಎಂದು ಸಂಘದ ಕಾರ್ಯದರ್ಶಿ ಲೋಹಿತ್ ಕೌಡಹಳ್ಳಿ ತಿಳಿಸಿದರು.

ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತದ ಕಾಫಿಯನ್ನು ಉಳಿಸಿ — ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿವೆ. ಕಾಫಿ ಕೃಷಿ ನಮ್ಮ ಜೀವನಾಧಾರ; ಬೆಳೆಗಾರರು ಮತ್ತು ತೋಟ ಕಾರ್ಮಿಕರು ಎದುರಿಸುತ್ತಿರುವ ಸವಾಲುಗಳನ್ನು ಸಮಾಜಕ್ಕೆ ತಿಳಿಸುವುದೇ ಈ ದಿನಾಚರಣೆಯ ಉದ್ದೇಶ ಎಂದು ಹೇಳಿದರು.
ಕಾರ್ಯಕ್ರಮ ಬೆಳಗ್ಗೆ 10:30ಕ್ಕೆ ಶ್ರೀ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಶ್ರೀ ಬಸವೇಶ್ವರ ಪುತ್ಥಳಿವರೆಗೆ ಕಾಲ್ನಡಿಗೆ ಜಾಥಾ ನಡೆಸಿ, ನಂತರ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹತ್ತಿರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸನ್ಮಾನ್ಯ ಕಂದಾಯ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಹಾಸನ ಜಿಲ್ಲಾ ಸಂಸದರು, ಶಾಸಕರು, ಕಾಫಿ ಮಂಡಳಿಯ ಅಧ್ಯಕ್ಷ ಎಂ.ಜೆ. ದಿನೇಶ್, ಸಿಇಒ ಕೂರ್ಮಾರಾವ್, ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ, ಮಿಸ್ ಯೂನಿವರ್ಸ್ ಕರ್ನಾಟಕ ಡಾ. ವಂಶಿಉದಯ್, ನಟ ವಿಶ್ವರಾಜ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಸುಮಾರು 3,000 ಕಾಫಿ ಪ್ರಿಯರಿಗೆ ಉಚಿತವಾಗಿ ಪರಿಶುದ್ಧ ಕಾಫಿ ವಿತರಿಸಲಾಗುವುದು. ಕಾಫಿ ಬೆಳೆಗಾರರು, ಪ್ರವಾಸಿಗರು ಹಾಗೂ ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಬೆಕ್ನಹಳ್ಳಿ ನಾಗರಾಜ್ ಅವರು ಮಾತನಾಡಿ ಅಂತಾರಾಷ್ಟ್ರೀಯ ಕಾಫಿ ಸಂಘಟನೆಯು ಅಕ್ಟೋಬರ್ 1ನ್ನು ಅಂತಾರಾಷ್ಟ್ರೀಯ ಕಾಫಿ ದಿನವಾಗಿ ಘೋಷಿಸಿದ್ದು, ಬೆಳೆಗಾರ ಸಂಘಟನೆಗಳು 2015 ರಿಂದ ಈ ದಿನಾಚರಣೆಯನ್ನು ಸಂಭ್ರಮದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸುತ್ತಿವೆ. ಈಗಾಗಲೇ ಹತ್ತು ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಯಶಸ್ವಿಯಾಗಿ ನೆರವೇರಿಸಿಲಾಗಿ, ಈ ಬಾರಿ 11ನೇ ದಿನಾಚರಣೆಯು ಹಬ್ಬದಂತೆ ನಡೆಸಲು ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಈ ಕಾರ್ಯಕ್ರಮದ ಮೂಲಕ ಕಾಫಿ ನಡೆದು ಬಂದ ದಾರಿ, ಪರಿಸರಕ್ಕೆ ಕಾಫಿ ಕೃಷಿಯ ಕೊಡುಗೆಗಳು ಮತ್ತು ಕಾಫಿಯ ಆರೋಗ್ಯಕರ ಗುಣಲಕ್ಷಣಗಳನ್ನು ಸಾರ್ವಜನಿಕರಿಗೆ ತಲುಪಿಸೋದು ಮುಖ್ಯ. ಜೊತೆಗೆ ಕಾಫಿ ಉದ್ಯಮದಲ್ಲಿ ಇರುವ ಕುಂದುಕೊರತೆಗಳನ್ನು ಬೆಳಕುಗೆಟ್ಟಿಸಿ, ದೇಶೀಯ ಬಳಕೆಯನ್ನು ಮತ್ತು ಕಾಫಿ ಉತ್ಪನ್ನಗಳ ಪ್ರಚಾರವನ್ನು ಹೆಚ್ಚಿಸುವ ಉದ್ದೇಶವಿದ್ದಾಗಿದೆ. ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ಪರಿಶುದ್ಧ ಕಾಫಿಯನ್ನು ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಎ.ಎಸ್. ಪರಮೇಶ್, ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ, ಸಚಿನ್, ಬೆಳೆಗಾರ ಪತ್ರಿಕೆಯ ಸಂಪಾದಕ ಸುರೇಂದ್ರ ಉಪಸ್ಥಿತರಿದ್ದರು.










