ಹಾಸನ: ವಿಶ್ವ ಪಾರಂಪರಿಕ ತಾಣಗಳು ಜಿಲ್ಲೆಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದ್ದು,ಪ್ರವಾಸೋದ್ಯಮದಲ್ಲಿ ಶ್ರೀಮಂತವಾಗಿರುವ ಜಿಲ್ಲೆ ನಮ್ಮದು. ಪ್ರವಾಸಿಗರ ಸ್ನೇಹಿಯಾಗಿ ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ತಿಳಿಸಿದ್ದಾರೆ.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಡೆಸ್ಟಿನಿ ರೈಡರ್ಸ್ ಇವರ ಸಂಯುಕ್ತಾಶ್ರಯದಲ್ಲಿಂದು ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ದೊಡ್ಡ ಗದ್ದುವಳ್ಳಿ ಲಕ್ಷ್ಮೀದೇವಿ ದೇವಾಲಯ ದಿಂದ ಹಗರೆ ಮಾರ್ಗವಾಗಿ ಹಳೇಬೀಡು ದೇವಸ್ಥಾನದವರೆಗೂ ಆಯೋಜಿಸಿದ್ದ ಬೈಕ್ ಜಾಥಾಕ್ಕೆ ಚಾಲನೆ ನೀಡಿ, ಸ್ವತಃ ಬೈಕ್ ಚಾಲನೆ ಮಾಡಿ ನಂತರ ಹಳೇಬೀಡಿನಲ್ಲಿ ಮಾತನಾಡಿದರು.
ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಪ್ರವಾಸೋದ್ಯಮ ಸುಸ್ಥಿರತೆ ಜೊತೆ ಜೊತೆಯಾಗಿ ಬೆಳೆಯಬೇಕು ಪ್ರವಾಸೋದ್ಯಮ ಇಲಾಖೆ ಬಹಳಷ್ಟು ಅಭಿವೃದ್ಧಿಯಾಗಬೇಕಾಗಿದೆ. ಪ್ರವಾಸೋದ್ಯಮ ಸ್ಥಳಗಳ ಬಗ್ಗೆ ಕೇವಲ ಪ್ರಚಾರಪಡಿಸುವುದಲ್ಲದೆ, ಅಗತ್ಯ ಮೂಲಭೂತ ಸೌಕರ್ಯ ಕೂಡ ಒದಗಿಸಿ ಕೊಡಬೇಕು.
ಪುರಾತನ ಮತು ಐತಿಹಾಸಿಕ ಸ್ಥಳಗಳನ್ನು ಸೂಕ್ತವಾಗಿ ಸಂರಕ್ಷಣೆ ಮಾಡುವುದರ ಮೂಲಕ ಮುಂದಿನ ಪೀಳಿಗೆಗೆ ಉಳಿಸಬೇಕು ಜೊತೆಗೆ ಆ ಸ್ಥಳದ ಇತಿಹಾಸದ ಕುರಿತಾಗಿ ತಿಳಿ ಹೇಳಬೇಕು ಶಿಲ್ಪಕಲೆಗೆ ಪ್ರಸಿದ್ಧವಾದ ತಾಣ ಹಳೇಬೀಡಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿದ ಸ್ಥಳವಾಗಿದೆ.
ಇಲ್ಲಿಯೂ ವಾಹನದ ನಿಲುಗಡೆಗೆ ಸ್ಥಳಾವಕಾಶದ ಸಮಸ್ಯೆ, ಸ್ವಚ್ಛತೆ, ರಸ್ತೆ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆ ಕಂಡುಬಂದಿದೆ.ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಳಾಗಿರುವ ಸ್ಲಾಬ್ ಸರಿಪಡಿಸಿ, ವ್ಯವಸ್ಥಿತವಾಗಿ ಕಸ ವಿಲೇವಾರಿ ಮಾಡುವುದರ ಜೊತೆಗೆ ಅಲ್ಲಲ್ಲಿಯೇ ಕಸದ ಬುಟ್ಟಿಗಳನ್ನಿಡಲು ಸೂಚಿಸಿ ದೇವಸ್ಥಾನದ ಸುಂದರಿ ಕರಣಕ್ಕಾಗಿ ದೇವಾಲಯದ ಆವರಣದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿ, ವಾಹನಗಳನ್ನು ಶಿಸ್ತಿನಿಂದ ನಿಲ್ಲಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.
ರಸ್ತೆಯ ಎರಡು ಬದಿ ಅಂಗಡಿಗಳು ರಸ್ತೆ ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿರುವುದರಿಂದ, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಫುಡ್ ಕೋರ್ಟ್ ರೀತಿ ಇರಲಿ. ಪಾದಚಾರಿಗಳ ಸಂಚಾರಕ್ಕೆ ತೊಂದರೆ ಆಗದಂತೆ ತೆರವುಗೊಳಿಸಲು ಸೂಚಿಸಿದರು.
ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸುವುದರಿಂದ ಜನರಿಗೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ರಸ್ತೆ ಬದಿಯ ವ್ಯಾಪಾರಿಗಳು ಅಂಗಡಿ ಮುಂದೆ ಕಸದ ಬುಟ್ಟಿ ಇಡುವಂತೆ ನೋಟಿಸ್ ನೀಡಲು ಪಿ.ಡಿ.ಒ.ಗೆ ಸೂಚನೆ ನೀಡಿದರು.










