ಶ್ರವಣಬೆಳಗೊಳ: ಕನ್ನಡ ಸಾಹಿತ್ಯಕ್ಕೆ ಜೈನ ಧರ್ಮ ಹಾಗೂ ಜೈನ ಸಾಹಿತಿಗಳ ಕೊಡುಗೆ ಅಪಾರ, ಅವಿಸ್ಮರಣೀಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹೆಚ್.ಬಿ.ಮದನಗೌಡ ಹೇಳಿದರು.ಇಲ್ಲಿನ ಬಾಹುಬಲಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿಂದು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ-ಸಿರಿವೈಭವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೈನ ಸಾಹಿತ್ಯ ಕನ್ನಡ ಸಾಹಿತ್ಯದ ಮೇಲೆ ಅಗಾಧ ಪ್ರಭಾವ ಬೀರಿದೆ,ಪ್ರೇರಣೆ ಆಗಿದೆ. ಇದರಿಂದ ಕನ್ನಡ ಸಾಹಿತ್ಯ ಹಿಗ್ಗಿದೆ, ಹಿರಿಮೆ ಪಡೆಯಲು ಸಾಧ್ಯವಾಗಿದೆ ಎಂದು ಬಣ್ಣಿಸಿದರು.ರತ್ನತ್ರಯರಾದ ಪಂಪ, ಪೊನ್ನ, ರನ್ನ ಹಾಗೂ ಜನ್ನ ಮೊದಲಾದ ಜೈನ ಕವಿಗಳ ಕೊಡುಗೆ ಅಪಾರ, ಅವರಿಂದಲೇ ಕನ್ನಡ ಶ್ರೀಮಂತವಾಗಿದೆ. ಈ ಮಹಾನ್ ಕವಿಗಳಿಂದಲೇ ಮಹಾಕಾವ್ಯ ಹುಟ್ಟಿವೆ ಎಂದು ಹೇಳಿದರು.
ಜೈನರ ಕಾಲದ ಶಿಲಾ ಶಾಸನಗಳು ಇದಕ್ಕೆ ಸಾಕ್ಷಿಯಾಗಿವೆ ಎಂದರು.ದೇಶದಲ್ಲಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಕನ್ನಡದ ಪ್ರಾಚೀನತೆ ಹಾಗೂ ಕನ್ನಡಕ್ಕೆ ಶಾಸ್ತ್ರೀಯ ಮಾನ್ಯತೆ ಸಿಗಲು ಹಾಸನ ಜಿಲ್ಲೆಯ ಕೊಡುಗೆ ಅವಿಸ್ಮರಣೀಯ. ನಮ್ಮ ಜಿಲ್ಲೆಯ ಬೇಲೂರು ತಾಲೂಕು ಹಲ್ಮಿಡಿಯಲ್ಲಿ ದೊರೆತ ಶಿಲಾಶಾಸನ ಕನ್ನಡದ ಪ್ರಾಚೀನತೆಗೆ ಹೆಗ್ಗುರುತಾಗಿದೆ ಎಂದು ನುಡಿದರು.
ಹಲ್ಮಿಡಿ ಶಾಸನ ಸಿಗದೇ ಇದ್ದಿದ್ದರೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಲು ಕಷ್ಟವಾಗುತ್ತಿತ್ತು ಎಂದರು.ನನ್ನ ಸೌಭಾಗ್ಯ ಎಂದರೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಹಲ್ಮಿಡಿ ಶಿಲಾ ಶಾಸನದ ಪ್ರತಿಕೃತಿಯನ್ನು ಅಭಿವೃದ್ಧಿ ಪಡಿಸಲು ಹಾಗೂ ಹಲ್ಮಿಡಿ ಗ್ರಾಮದ ಮೂಲ ಸೌಕರ್ಯ ಅಭಿವೃದ್ಧಿಗೆ ಶ್ರಮಿಸಿದ ಸಮಾಧಾನ ನನ್ನದು ಎಂದರು.
ಇದೇ ವೇಳೆ ಜೈನಕಾಶಿ ಶ್ರವಣಬೆಳಗೊಳಕ್ಕೂ ತಮಗೂ ಇರುವ ನಂಟನ್ನು ನೆನಪಿಸಿಕೊಂಡ ಮದನಗೌಡರು, ಜಿನೈಕ್ಯ ಪರಮಪೂಜ್ಯ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಎರಡು ದಶಕಗಳ ಹಿಂದೆ ಇಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು ಎಂದು ಸ್ಮರಿಸಿದರು.
ಜಾನಪದ ಗಾಯಕ ಟಿ.ಆರ್.ಸ್ವಾಮಿ ಮಾತನಾಡಿ, ಗಡಿ ಸಮಸ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಈಗಲಾದರೂ ನಾವೆಲ್ಲರೂ ಎಚ್ಚೆತ್ತುಕೊಳ್ಳದೇ ಇದ್ದರೆ ಸಂಕಷ್ಟ ಎದುರಿಸಬೇಕಾಗಾಗುತ್ತದೆ. ಕೇಂದ್ರ ಸರ್ಕಾರ ನಡೆಸುವ ಎಲ್ಲ ಪರೀಕ್ಷೆ ಕನ್ನಡದಲ್ಲಿ ನಡೆಯಬೇಕು. ಕೇಂದ್ರದ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಅವಕಾಶ ಕೊಡಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಮಾತೃಭಾಷೆಯಲ್ಲಿ ಶಿಕ್ಷಣ ಸಿಗುವಂತಾಗಬೇಕು ಎಂದು ಕೊಡಬೇಕು.
ಈ ವೇಳೆ ಪ್ರಾಂಶುಪಾಲರಾದ ಡಾ.ಡಿ.ಸುನೀಲ್ ಕುಮಾರ್,ಚನ್ನರಾಯಪಟ್ಟಣ ಸ್ವಯಂ ಪ್ರೇರಿತ ರಕ್ತದಾನ ಕೇಂದ್ರದ ಮುಖ್ಯಸ್ಥ ಭರತ್, ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ಹಾಜರಿದ್ದರು.










