- ಸಕಲೇಶಪುರ ಹಳೆಯ ಬಸ್ ನಿಲ್ದಾಣದ ಬಳಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಮಿನಿ ಬಸ್ ತಂಗುದಾಣ ಕಾಮಗಾರಿಗೆ ಉಪನೋಂದಣಾಧಿಕಾರಿ ತಡೆ ನೀಡಿದ್ದು, ಮಳೆಯಲ್ಲಿ ಪ್ರಯಾಣಿಕರ ಪರದಾಟ ಮುಂದುವರಿದಿದೆ.
ಸಕಲೇಶಪುರ: ಪಟ್ಟಣದ ಹಳೆಯ ಬಸ್ ನಿಲ್ದಾಣ ಮುಂಭಾಗ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಾಣ ಮಾಡುತ್ತಿರುವ ಮಿನಿ ಬಸ್ ನಿಲ್ದಾಣ ಕಾಮಗಾರಿ ಜಾಗದ ವಿವಾದದಿಂದಾಗಿ ಅರ್ಧಕ್ಕೆ ನಿಂತಿದೆ.
₹10 ಲಕ್ಷ ರೂಪಾಯಿ ಶಾಸಕರ ಅನುದಾನದಲ್ಲಿ ಕೆಆರ್ಡಿಎಲ್ ನಿರ್ಮಿತಿ ಕೇಂದ್ರದಿಂದ ಕಾಮಗಾರಿ ನಡೆಯುತ್ತಿತ್ತು. ಶೇ 90ರಷ್ಟು ಕಾಮಗಾರಿ ಪೂರ್ಣಗೊಂಡು, ಮೇಲ್ಭಾಗದಲ್ಲಿ ಶೀಟ್ ಹಾಗೂ ಟೈಲ್ಸ್, ಕುಳಿತುಕೊಳ್ಳುವ ಕುರ್ಚಿ ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ಈ ಹಂತದಲ್ಲಿ ಉಪನೋಂದಣಾಧಿಕಾರಿ ಅವರು, ‘ಈ ಜಾಗದಲ್ಲಿ ಹಿಂದೆ ಉಪನೋಂದಣಾಧಿಕಾರಿ ಕಚೇರಿ ಇತ್ತು. ಈ ಜಾಗ ನಮ್ಮ ಇಲಾಖೆಗೆ ಸೇರಿದ್ದು’ ಎಂದು ತಕಾರಾರು ತೆಗೆದಿದ್ದಾರೆ. ಇದರಿಂದಾಗಿ ಎರಡು ವಾರಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ.
ಸರಿಯಾಗಿ ಕೆಲಸ ಮಾಡಿದರೆ ಎರಡು ದಿನಗಳಲ್ಲಿ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುತ್ತದೆ. ಪ್ರಯಾಣಿಕರು ಮಳೆಯಲ್ಲಿ ನೆನೆಯದೇ, ವಯಸ್ಸಾದವರು ರಸ್ತೆ ಬದಿ ಗಂಟೆ ಗಟ್ಟಲೆ ನಿಲ್ಲದೇ, ಆರಾಮವಾಗಿ ಕುಳಿತು ಬಸ್ ಹತ್ತಿ ಪ್ರಯಾಣ ಮಾಡಬಹುದು. ಇದೀಗ ನಿತ್ಯ ಮಳೆ ಸುರಿಯುತ್ತಿದ್ದು, ಪ್ರಯಾಣಿಕರು ರಸ್ತೆ ಬದಿಯಲ್ಲಿ ಕೊಡೆ ಹಿಡಿದು ನಿಲ್ಲಬೇಕಾಗಿದೆ. ಬೆನ್ನಿನ ಮೇಲೆ ಕೆಜಿಗಟ್ಟಲೆ ತೂಕದ ಪುಸ್ತಕ ಹೊತ್ತು ವಿದ್ಯಾರ್ಥಿಗಳು ಮಳೆಯಲ್ಲಿ ನೆನೆದುಕೊಂಡು ನಿಲ್ಲುವುದು, ರೋಗಿಗಳು, ಮಹಿಳೆಯರು, ವಯಸ್ಸಾದವರು ಕಷ್ಟದಲ್ಲಿ ನಿಂತು ಬಸ್ಗೆ ಕಾಯುತ್ತಿದ್ದಾರೆ.
ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರೇ ಪಟ್ಟಣಕ್ಕೆ ದಿಢೀರ್ ಭೇಟಿ ನೀಡಿ, ಇದೇ ಸ್ಥಳದಲ್ಲಿ ಸಾರ್ವಜನಿಕರು ಬಸ್ ಹತ್ತಲು ನಿಲ್ಲುವುದಕ್ಕೂ ಸಾಧ್ಯವಿಲ್ಲದಂತೆ ಒತ್ತುವರಿಯಾಗಿದ್ದ ಬೀದಿ ಬದಿಯ ವ್ಯಾಪಾರಿಗಳನ್ನು ತೆರವುಗೊಳಿಸಿದ್ದರು. ತೆರವುಗೊಳಿಸಿದ ಉದ್ದೇಶವೇ ಸಾರ್ವಜನಿಕರ ಸುಗಮ ನಡಿಗೆ ಹಾಗೂ ಪ್ರಯಾಣಿಕರು ಸುರಕ್ಷಿತವಾಗಿ ಬಸ್ ಹತ್ತಿ ಇಳಿಯುವುದಕ್ಕಾಗಿ. ಆದರೆ ತೆರವುಗೊಳಿಸಿದ ನಂತರ ಖಾಸಗಿ ವ್ಯಕ್ತಿಗಳು ತಮ್ಮ ಕಾರುಗಳನ್ನು ನಿಲ್ಲಿಸುವ ಪಾರ್ಕಿಂಗ್ ಸ್ಥಳವನ್ನಾಗಿ ಮಾಡಿಕೊಂಡಿದ್ದರು. ಈ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ವ್ಯವಸ್ಥಿತ ಬಸ್ ನಿಲ್ದಾಣ ಆಗಬೇಕು ಎಂಬ ಬೇಡಿಕೆ ಸಾರ್ವಜನಿಕರಿಂದ, ಅಧಿಕಾರಿಗಳಿಂದ ಹಾಗೂ ರಾಜಕೀಯ ಪಕ್ಷಗಳ ಮುಖಂಡರಲ್ಲಿಯೂ ಇತ್ತು.
ಈ ಬಗ್ಗೆ ಹಿಂದಿನ ಶಾಸಕ ಎಚ್.ಕೆ. ಕುಮಾರಸ್ವಾಮಿ ಸಹ ಈ ಸ್ಥಳದಲ್ಲಿ ಪ್ರಯಾಣಿಕರಿಗೆ ಬಸ್ ನಿಲ್ದಾಣ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಅದರಂತೆ ಪುರಸಭೆಯಲ್ಲಿ ಅನುದಾನದಲ್ಲಿ ಬಸ್ ನಿಲ್ದಾಣ ಮಾಡಲು ಸಭೆಯಲ್ಲಿ ಸದಸ್ಯರು ನಿರ್ಣಯ ಕೈಗೊಂಡು ಅನುದಾನವನ್ನೂ ಇಡಲಾಗಿತ್ತು, ಅಷ್ಟರಲ್ಲಿ ಅವರ ಅವಧಿ ಮುಗಿದು ಹೋಗಿತ್ತು.
ಇದೀಗ ಶಾಸಕರ ಅನುದಾನದಲ್ಲಿ ಕಾಮಗಾರಿ ಅಂತಿಮ ಹಂತದಲ್ಲಿ, ಉಪನೋಂದಣಾಧಿಕಾರಿ ತಕಾರಾರು ತೆಗೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಸ್ ನಿಲ್ದಾಣ ಕಾಮಗಾರಿ ಮುಂದುವರಿಸುವಂತೆ ನಾವು ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಮಲೆನಾಡು ಆಟೋ ಚಾಲಕರ ಸಂಘದ ಅಧ್ಯಕ್ಷ ಯೋಗೇಶ್ ತಿಳಿಸಿದರು.
Story Credit: Janekere R.Paramesh












