ಬೇಲೂರು : ವಿದ್ಯಾರ್ಥಿಗಳು ತಮ್ಮ ಭವಿಷ್ಯದ ದೃಷ್ಟಿಯಿಂದ ಶ್ರಮ ವಹಿಸಿ ವಿದ್ಯಾರ್ಜನೆ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನಿವೃತ್ತ ಐ.ಎ.ಎಸ್. ಅಧಿಕಾರಿ ಕೆ. ಎಸ್. ಪ್ರಭಾಕರ್ ನುಡಿದರು.
ಭಾನುವಾರ ಬೇಲೂರಿನ ಕಾಫಿ ಬೆಳೆಗಾರರ ಸಂಘದ ಕಟ್ಟಡದಲ್ಲಿ ವಿರಾಟ್ ವಿಶ್ವ ಗ್ಲೋಬಲ್ ಫೌಂಡೇಷನ್ ಹಾಸನ ಚಿಕ್ಕಮಗಳೂರು ಪ್ರಾದೇಶಿಕ ಸಮಿತಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ವಿಶ್ವಕರ್ಮ ಸಮಾಜ ಒಗ್ಗಟ್ಟು ಮತ್ತು ಐಕ್ಯತೆಯನ್ನು ಸಾಧಿಸುವ ಮೂಲಕ ಸಮಾಜಕ್ಕೆ ಬೇಕಾದ ಅನುಕೂಲತೆಗಳನ್ನು ಪಡೆದುಕೊಳ್ಳಬೇಕೆಂದರು.
ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾದ ಎಂ. ಎಲ್. ವಿನಾಯಕ ಆಚಾರ್ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಅಧಿಕಾರಿಗಳಾಗಬೇಕೆಂಬ ಮಹೋನ್ನತ ಧ್ಯೇಯವನ್ನು ಹೊಂದಿದ್ದರೆ ಉತ್ತಮ ಗುರಿ ಸಾಧಿಸಬಹುದು ಎಂದರು.
ಫೌಂಡೇಶನ್ ನ ಆರ್ಥಿಕ ಮುಖ್ಯಸ್ಥ ಎ. ರಾಜೇಶ್ ಮಾತನಾಡಿ, ಸಮಾಜದ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್. ವಿ. ಹರೀಶ್ ಮಾತನಾಡಿ, ಗುರು ಹಿರಿಯರನ್ನು ಗೌರವಿಸಬೇಕು. ವಿಶ್ವಕರ್ಮ ಅಭಿವೃದ್ಧಿ ನಿಗಮದಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿಯಲ್ಲಿ ದೊರೆಯುವ ಸಾಲ ಸೌಲಭ್ಯವನ್ನು ಅಗತ್ಯವಿರುವ ವಿದ್ಯಾರ್ಥಿಗಳು ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜಕ್ಕೆ ಆಸ್ತಿಯಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೇಲೂರು ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಎನ್. ಎಸ್. ಪುರುಷೋತ್ತಮಚಾರ್ ವಹಿಸಿದ್ದರು. ಮೊದಲಿಗೆ ಹೆಚ್. ಪಿ. ಭೋಗರಾಜಾಚಾರ್ ಸ್ವಾಗತಿಸಿದರೆ ಸಿ. ವಾಸುದೇವ್ ವಂದಿಸಿದರು. ಸುಪ್ರಿಯಾ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಫೌಂಡೇಶನ್ ನ ಪ್ರಾದೇಶಿಕ ಸಮಿತಿ ಅಧ್ಯಕ್ಷ ಕೆ. ಎಸ್. ಜಗದೀಶ್, ಕೋಕಿಲ, ಜಿ. ಕುಮಾರ್, ಜಿ. ಟಿ. ರತ್ನಾಕರ್, ಎಂ. ಜಿ. ವೆಂಕಟೇಶ್, ಮೀನಾಕ್ಷಿ ಶಂಕರಾಚಾರ್ಯ, ಉಮೇಶ್ ಆಚಾರ್, ಹಿತೇಶ್ ಮತ್ತಿತರರು ಹಾಜರಿದ್ದರು.










