ಸಕಲೇಶಪುರ: ನಂಜಮ್ಮ ಮಹಿಳಾ ಸಮಾಜದ ವಿರುದ್ಧ ಅರ್ಚನಾ ಜಯಂತ್ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ನಂಜಮ್ಮ ಮಹಿಳಾ ಸಮಾಜದ ಅಧ್ಯಕ್ಷೆ ಕೌಸಲ್ಯ ಲಕ್ಷ್ಮಣ ಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಜಮ್ಮ ಮಹಿಳಾ ಸಮಾಜವು ಸ್ಥಾಪನೆಯ ಉದ್ದೇಶಕ್ಕೆ ತಕ್ಕಂತೆ ಇಂದಿನ ಆಡಳಿತ ಸಮಿತಿಯು ಕಾರ್ಯನಿರ್ವಹಿಸುತ್ತಿದೆ. ಸರ್ವರಿಗೂ ಸದ್ಯಸತ್ವ ದೊರೆಯುತ್ತಿದೆ ಮತ್ತು ಮಹಿಳಾಪರ ಕಾರ್ಯಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿದರು.
ಮಹಿಳಾ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ, ವಿಶೇಷ ಪೂಜೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು. ಮಹಿಳಾ ಸಮಾಜವು ಸಮಾಜದಿಂದ ದೂರವಾಗಿಲ್ಲ ಎಂದು ಸ್ಪಷ್ಟಪಡಿಸಿ, ನಂಜಮ್ಮ ಮಹಿಳಾ ಸಮಾಜವು ತನ್ನ ಬೈಲಾದ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆರ್ಥಿಕ ಲೆಕ್ಕಾಚಾರಗಳಿಗೆ ಸಂಬಂಧಿಸಿದಂತೆ ಆಡಿಟ್ ಮಾಡಿಸಿ ಸಹಕಾರ ಸಂಘಕ್ಕೆ ಸಲ್ಲಿಸಲಾಗಿದೆ.
ಮಾಹಿತಿ ಹಕ್ಕಿನಡಿ ಅರ್ಚನಾ ಜಯಂತ್ ಕೇಳಿರುವ ಮಾಹಿತಿಯನ್ನು ನೀಡುವುದಿಲ್ಲ, ಏಕೆಂದರೆ ಇದಕ್ಕೆ ನಮ್ಮ ಸದಸ್ಯರ ಒಪ್ಪಿಗೆ ಇಲ್ಲ. ಸರ್ವ ಸದಸ್ಯರ ಸಭೆಯಲ್ಲಿ ಮಾತ್ರ ಮಾಹಿತಿಯನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಒಂದು ಸುಂದರ ಕಟ್ಟಡ ನಿರ್ಮಾಣವಾಗಬೇಕೆಂಬುದು ನಮ್ಮ ಕನಸಾಗಿದೆ, ಆದರೆ ಇದಕ್ಕೆ ಆರ್ಥಿಕ ಮೂಲಗಳ ಕೊರತೆಯಿದೆ. ಹಿಂದೆ, ಅಂದರೆ 15 ವರ್ಷಗಳ ಹಿಂದೆ, ₹25 ಲಕ್ಷ ವೆಚ್ಚದಲ್ಲಿ ಕಟ್ಟಡದ ದುರಸ್ತಿ ಕಾರ್ಯ ನಡೆದಿತ್ತು. ಅದಾದ ನಂತರ ಮತ್ತೆ ₹2 ಲಕ್ಷ ವೆಚ್ಚ ಮಾಡಲಾಗಿದೆ. ಆದರೂ, ಕಟ್ಟಡವು ಇನ್ನೂ ಉತ್ತಮ ಸ್ಥಿತಿಯಲ್ಲಿ ಇಲ್ಲ ಎಂದು ಅವರು ತಿಳಿಸಿದರು.
ಶೈಲಾ ರವಿಕುಮಾರ್ ಅವರು ಹಾಲಿ ಸದಸ್ಯರಾಗಿದ್ದಾರೆ. ಇತ್ತೀಚಿಗೆ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಅವರು ಬಹುಮಾನ ಗಳಿಸಿದ್ದಾರೆ. ಸಮಾಜದಲ್ಲಿ 120 ಸದಸ್ಯರಿದ್ದಾರೆ, ಇವರಲ್ಲಿ 60 ಜನ ಮಾತ್ರ ಸದಸ್ಯತ್ವವನ್ನು ನವೀಕರಿಸಿದ್ದಾರೆ, ಉಳಿದವರು ನವೀಕರಣ ಮಾಡಿಲ್ಲ ಎಂದು ಅವರು ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ಮಹಿಳಾ ಸಮಾಜದ ಉಪಾಧ್ಯಕ್ಷೆ ಶೋಭಾ ಮಂಜುನಾಥ್, ಕಾರ್ಯದರ್ಶಿ ಸುಪ್ರಿಯಾ ರತನ್, ಖಜಾಂಚಿ ನಿರ್ಮಲಾ ಪವಿತ್ರನ್, ಸಹ ಕಾರ್ಯದರ್ಶಿ ಸವಿತಾ ವಿಷ್ಣುಮೂರ್ತಿ, ಸದಸ್ಯರಾದ ರಾಗಿಣಿ ನಾಯ್ಡು, ಜ್ಯೋತಿ ನಂದನ್ ಉಪಸ್ಥಿತರಿದ್ದರು.










