ಮಂಡ್ಯ : ಮಂಡ್ಯದಲ್ಲಿ ಬೆಚ್ಚಿಬಿಳಿಸುವ ಕೃತ್ಯ: ಗೃಹಪ್ರವೇಶಕ್ಕೆ ಹೋದವನು ಹೆಣವಾದ, ತೊಟ್ಟಿದ್ದ ಬಟ್ಟೆ ಚೆಲ್ಲಾಪಿಲ್ಲಿ!

ಮಂಡ್ಯ : ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಅಕ್ಕಮನಕೊಪ್ಪಲು ಗ್ರಾಮದಲ್ಲಿ ಭಯ ಹುಟ್ಟಿಸುವ ಘಟನೆ ನಡೆದಿದೆ. ಬನ್ನೂರಿನಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಹುಟ್ಟೂರಿನ ಮನೆಯ ಜಗುಲಿಯ ಮೇಲೆಯೇ ರಕ್ತದ ಮಡುವಿನಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಜಗುಲಿಯ ಮೇಲೆಯೇ ಶವ: ಕೊಲೆ ಶಂಕೆ ಗಟ್ಟಿಗೆ

ಅಕ್ಕಮನಕೊಪ್ಪಲು ಗ್ರಾಮದ ಮಂಜು (44) ಎಂಬವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೃತರ ಮುಖದಲ್ಲಿ ಗಂಭೀರ ಗಾಯಗಳಿದ್ದು, ಕತ್ತು ಬಿಗಿದಿರುವ ಗುರುತುಗಳು ಕಂಡುಬಂದಿವೆ. ಜಗುಲಿಯಿಂದ ಸ್ವಲ್ಪ ದೂರದಲ್ಲಿ ಅವರ ಬಟ್ಟೆಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ದುಷ್ಕರ್ಮಿಗಳು ಬೇರೆಡೆ ಕೊಲೆ ಮಾಡಿ, ಶವವನ್ನು ತಂದು ಮನೆಯ ಜಗುಲಿಯ ಮೇಲೆ ಬಿಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಗೃಹಪ್ರವೇಶಕ್ಕೆ ಹೋದವರು ಮನೆ ಸೇರಲೇ ಇಲ್ಲ

ಬನ್ನೂರಿನಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಮಂಜು ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಅಲ್ಲಿಯೇ ವಾಸವಿದ್ದರು. ಸೋಮವಾರ ಹುಲ್ಲೇಗಾಲ ಗ್ರಾಮದಲ್ಲಿ ನಡೆದ ಸಂಬಂಧಿಕರ ಗೃಹಪ್ರವೇಶ ಸಮಾರಂಭಕ್ಕೆ ತೆರಳಿದ್ದ ಅವರು, ಕಾರ್ಯಕ್ರಮ ಮುಗಿದ ಬಳಿಕ ಮನೆಗೆ ವಾಪಸ್ ಆಗಿರಲಿಲ್ಲ. ಆತಂಕಗೊಂಡ ಪತ್ನಿ ಹುಡುಕಾಟ ನಡೆಸಿದರೂ ಫಲ ಸಿಗದೆ, ಮಂಗಳವಾರ ಬೆಳಿಗ್ಗೆ ಹುಟ್ಟೂರಿನ ಮನೆಯ ಜಗುಲಿಯಲ್ಲಿ ಮಂಜು ಶವವಾಗಿ ಪತ್ತೆಯಾಗಿದ್ದಾರೆ.

ಬಟ್ಟೆಗಳೇ ಹೇಳುತ್ತಿವೆ ಹೋರಾಟದ ಕಥೆ?

ಮೃತರ ಶರ್ಟ್ ಮತ್ತು ಪ್ಯಾಂಟ್ ಬೇರೆಡೆ ಬಿದ್ದಿರುವುದು ಕೊಲೆಗೂ ಮುನ್ನ ತೀವ್ರ ಸಂಘರ್ಷ ನಡೆದಿರಬಹುದೆಂಬ ಅನುಮಾನ ಮೂಡಿಸಿದೆ. ಇದು ನಿಸ್ಸಂದೇಹವಾಗಿ ಕೊಲೆ ಪ್ರಕರಣವೆಂದು ಕುಟುಂಬಸ್ಥರು ಆರೋಪಿಸಿದ್ದು, ಮಂಜು ಅವರ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಾವಿನ ಹಿಂದಿನ ರಹಸ್ಯ ಬಯಲು ಮಾಡಲು ಪೊಲೀಸ್ ತನಿಖೆ

ಘಟನಾ ಸ್ಥಳಕ್ಕೆ ಮಳವಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ‘ಅನುಮಾನಾಸ್ಪದ ಸಾವು’ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಹಳೇ ದ್ವೇಷವೋ ಅಥವಾ ಬೇರೆ ಕಾರಣವೋ ಈ ಸಾವಿನ ಹಿಂದೆ ಇರುವುದೇ ಎಂಬುದರ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.