ಹಾಸನ, ಜುಲೈ 29: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆಯ ಆರೋಪದಡಿ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಹಾಸನ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ ಅವರ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಒಟ್ಟು ಐದು ಕಡೆಗಳಲ್ಲಿ ಈ ದಾಳಿ ನಡೆದಿದ್ದು, ಜಯಣ್ಣನ ಮೊದಲ ಪತ್ನಿಯ ನಿವಾಸ (ಹಾಸನ ಜಯನಗರ), ಎರಡನೇ ಪತ್ನಿಯ ನಿವಾಸ (ಚನ್ನಪಟ್ಟಣ ಬಡಾವಣೆ ಹೌಸಿಂಗ್ ಬೋರ್ಡ್), ಎರಡನೇ ಪತ್ನಿಗೆ ಸೇರಿದ ಹಾರ್ಡ್ವೇರ್ ಅಂಗಡಿ (ಚನ್ನಪಟ್ಟಣ), ಕೊಡಗು ಶನಿವಾರಸಂತೆಯಲ್ಲಿರುವ ಫಾರಂ ಹೌಸ್ ಮತ್ತು ಹಾಸನ ಆರ್ಸಿ ರಸ್ತೆಯಲ್ಲಿರುವ ಲೋಕೋಪಯೋಗಿ ಭವನದಲ್ಲಿರುವ ಜಯಣ್ಣ ಕಚೇರಿ ಸೇರಿದಂತೆ ಎಲ್ಲೆಡೆ ಪರಿಶೀಲನೆ ನಡೆಯುತ್ತಿದೆ.
ಈ ದಾಳಿಗಳನ್ನು ಲೋಕಾಯುಕ್ತ ಅಧಿಕಾರಿಗಳ ತಂಡ ನಿರ್ವಹಿಸುತ್ತಿದ್ದು, ಆಸ್ತಿ ದಾಖಲೆಗಳು ಮತ್ತು ಆರ್ಥಿಕ ಅನಿಯಮಗಳ ಬಗ್ಗೆ ತೀವ್ರ ತನಿಖೆ ಆರಂಭವಾಗಿದೆ.
ಜಯಣ್ಣ ಅವರ ಫಾರಂ ಹೌಸ್ ಮತ್ತು ತೋಟದ ಸ್ಥಿತಿಯನ್ನು ಸಹ ಪರೀಕ್ಷಿಸಲಾಗುತ್ತಿದ್ದು, ಈ ದಾಳಿಯ ಮೂಲಕ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲಾಗುತ್ತಿದೆ.










