0.9 C
Munich
Home ಮನರಂಜನೆ ಗ್ರಾಮೀಣ ಕಥೆ ‘ಕುಂಟೆಬಿಲ್ಲೆ’ ಇಂದು (ಸೆಪ್ಟೆಂಬರ್‌ 26) ತೆರೆಗೆ

ಗ್ರಾಮೀಣ ಕಥೆ ‘ಕುಂಟೆಬಿಲ್ಲೆ’ ಇಂದು (ಸೆಪ್ಟೆಂಬರ್‌ 26) ತೆರೆಗೆ

ಗ್ರಾಮೀಣ ಕಥೆ 'ಕುಂಟೆಬಿಲ್ಲೆ' ಇಂದು (ಸೆಪ್ಟೆಂಬರ್‌ 26) ತೆರೆಗೆ

ಮತ್ತೊಂದು ಗ್ರಾಮೀಣ ಸೊಗಡಿನ ಕಥೆಯೊಂದನ್ನು ತೆರೆ ಮೇಲೆ ತರಲು ‘ದಕ್ಷಯಜ್ಞ’, ‘ತರ್ಲೆ ವಿಲೇಜ್‌’ ಖ್ಯಾತಿಯ ನಿರ್ದೇಶಕ ಜಿಬಿಎಸ್‌ ಸಿದ್ದೇಗೌಡ ಮುಂದಾಗಿದ್ದಾರೆ. ಸಿದ್ದೇಗೌಡ ಜಿ.ಬಿ‌.ಎಸ್. ಅವರು ಕುಂಟೆಬಿಲ್ಲೆಸಿನಿಮಾ ನಿರ್ದೇಶನ ಮಾಡಿದ್ದು, ಯುವ ನಟ ಯದು ಮೊದಲ ಬಾರಿಗೆ ನಾಯಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ‌. ಭೋಜ್ ಪುರಿ ಸೇರಿದಂತೆ ಹಲವು ಭಾಷೆಗಳಲ್ಲಿ ಹತ್ತಕ್ಕೂ ಹೆಚ್ಚು ಚಿತ್ರ ಮಾಡಿರುವ ಮೇಘ ಶ್ರೀ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪೋಷಕ ಪಾತ್ರಗಳಲ್ಲಿ ಸುಚೇಂದ್ರ ಪ್ರಸಾದ್, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಕಾವ್ಯ ಮೊದಲಾದವರು ಅಭಿನಯಿಸಿರುವ ಈ ಚಿತ್ರ ಇಂದು (ಸೆಪ್ಟೆಂಬರ್ 26) ತೆರೆಗೆ ಬರುತ್ತಿದೆ.

‘ನಾವೆಲ್ಲಾ ಚಿಕ್ಕ ವಯಸ್ಸಿನಲ್ಲಿ ಆಡುತ್ತಿದ್ದ ಆಟ ಕುಂಟೆಬಿಲ್ಲೆ‌. ಅದೇ ಟೈಟಲ್ ಇಟ್ಟುಕೊಂಡು ಪ್ರೀತಿ, ನೋವು, ಕಾಮ ಎಲ್ಲವನ್ನೂ ಕಟ್ಟಿಕೊಡಲಿದ್ದೇವೆ ಹಳ್ಳಿಯ ಸೊಗಡಿನ ಕಥೆ. ಲವ್​, ಸಸ್ಪೆನ್ಸ್​ ಅಂಶಗಳಿರುವ ಚಿತ್ರ. ನಮ್ಮ ಕೈಯಾರೆ ನಾವೇ ನಮ್ಮ ಪ್ರೀತಿಯನ್ನು ಹೇಗೆ ಹಾಳು ಮಾಡಿಕೊಳ್ಳುತ್ತೇವೆ ಎಂಬುದರ ಸುತ್ತ ಕಥೆ ಸಾಗುತ್ತದೆ. ಚಿತ್ರ ಇದೇ ತಿಂಗಳ 26ರಂದು ತೆರೆಗೆ ಬರುತ್ತಿದ್ದು ನಿಮ್ಮೆಲ್ಲರ ಸಹಕಾರ ಇರಲಿ ಅಲ್ಲದೆ “ನಮಗೆ ನಮ್ಮ ಚಿತ್ರದ ಬಗ್ಗೆ ಭರವಸೆ ಇದೆ. ನಮ್ಮ ಚಿತ್ರ ತೆರೆಗೆ ಬಂದ ಒಂದು ವಾರದಲ್ಲಿಯೇ “ಕಾಂತಾರ” ಬರುತ್ತಿದೆ. ಆದರೆ ಅದರಿಂದ ನಮಗೇನೂ ಭಯವಿಲ್ಲ. ಪ್ರೇಕ್ಷಕರು ನಮ್ಮ ಚಿತ್ರ ಇಷ್ಟ ಪಟ್ಟು ನೋಡುತ್ತಾರೆ ಎನ್ನುವುದರಲ್ಲಿ ಯಾವ ಅನುಮಾನ ಇಲ್ಲ” ಎನ್ನುತ್ತಾರೆ ಸಿದ್ದೇಗೌಡ.

ಚಿತ್ರ ನಿರ್ಮಾಪಕರೂ ಆದ ನಾಯಕ ನಟನ ತಂದೆ ಕುಮಾರ್ ಗೌಡ, ‘ನಾವು ಹಲವು ತಿಂಗಳಿನಿಂದ ಕಷ್ಟಪಟ್ಟು ಈ ಚಿತ್ರ ಮಾಡಿದ್ದೇವೆ. ನನ್ನ ಮಗನೊಬ್ಬ ಉತ್ತಮ ನಟನಾಗಬೇಕೆನ್ನುವುದು ನನ್ನ ಬಯಕೆ. 30 ವರ್ಷದ ಹಿಂದೆ ನಾನೊಬ್ಬ ಕಲಾವಿದ ಆಗಬೇಕು ಎಂದು ಬೆಂಗಳೂರಿಗೆ ಬಂದಿದ್ದೆ ಆದರೆ ಅದು ಸಾಧ್ಯವಾಗಿರಲಿಲ್ಲ‌. ಈಗ ಅದನ್ನು ನನ್ನ ಮಗನ ಮೂಲಕ ಈಡೇರಿಸಿಕೊಳ್ಳುತ್ತಿದ್ದೇನೆ. ನಾನು ಇದಕ್ಕಾಗಿ ಈ ಚಿತ್ರದ ಕುರಿತು ನಿಮ್ಮ ಸಹಕಾರ ಬೆಂಬಲ ಕೇಳುತ್ತೇನೆ’ ಎನ್ನುತ್ತಾರೆ. ನಾಯಕ ಯದು, “ನನ್ನ ತಂದೆಯವರ ಆಸೆ ಈಡೇರಿಸುವ ಸಲುವಾಗಿ ನಾನಿಂದು ಈ ಕ್ಷೇತ್ರಕ್ಕೆ ಬಂದಿದ್ದು ನಾನು ಕ್ರಿಕೆಟ್ ಆಟಗಾರನಾಗಬೇಕೆನ್ನುವ ಆಸೆ ಹೊಂದಿದ್ದೆ. ಅದಕ್ಕಾಗಿ ತರಬೇತಿ ಸಹ ಪಡೆಯುತ್ತಿದ್ದೆ.ಆದರೆ ತಂದೆಯವರ ಆಸೆ ಈಡೇರಿಸುವುದಕ್ಕಾಗಿ ಅದನ್ನು ಅರ್ಧಕ್ಕೇ ಬಿಟ್ಟುಬಂದೆ. ನಾನು ರಂಗಭೂಮಿಯ ತರಬೇತಿ ಪಡೆದಿದ್ದು ಈಗ ವಿದ್ಯಾಭ್ಯಾಸ ಮುಗಿಸಿ ನಟನೆಯತ್ತ ಬಂದಿದ್ದೇನೆ. ಈ ಚಿತ್ರದಲ್ಲಿ ಒಬ್ಬ ಕೋಳಿ ಫಾರಂನಲ್ಲಿ ಕೆಲಸ ಮಾಡುವ ಯುವಕನಾಗಿ ಕಾಣಿಸಿಕೊಳ್ಳುತ್ತಿದ್ದು ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಅವನೇನು ಮಾಡುತ್ತಾನೆ ಎನ್ನುವುದು ಚಿತ್ರದ ಕಥಾ ಸಾರಾಂಶ’ ಎನ್ನುತ್ತಾರೆ.

‘ನಾವೀಗ ಕನ್ನಡ ಚಿತ್ರರಂಗ ಸ್ವಲ್ಪ ಕಷ್ಟದಲ್ಲಿದೆ ಹಾಗಾಗಿ ಮಾದ್ಯಮದವರು ಈ ಚಿತ್ರಕ್ಕೆ ಬೆಂಬಲ ಕೊಡಬೇಕು. ಯಾವುದೇ ದೊಡ್ದ ಸ್ಟಾರ್ ನಟರಾದರೂ ತಾವು ಅಭಿನಯಿಸಿದ ಚಿತ್ರಗಳ ಪ್ರಮೋಷನ್ ಗೆ ಬರಬೇಕು, ಬೆಂಬಲಿಸಬೇಕು’ ಎನ್ನುವುದು ನಟಿ ಸುಧಾ ಬೆಳವಾಡಿ ಅವರ ಮಾತು. ನಾಯಕ ನಟಿ ಮೇಘಶ್ರೀ, “ನನ್ನ ಪಾತ್ರ ಬಹಳ ಬೋಲ್ಡ್ ಆಗಿದೆ. ಇಂತಹಾ ಪಾತ್ರ ಮಾಡುವುದು ಸುಲಭವಲ್ಲ. ಇದು ವಿಶೇಷ ಕಥೆ ಹಾಗೂ ಪಾತ್ರವಾಗಿರುವುದರಿಂದಲೇ ನಾನು ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡೆ. ಯಾಕೆಂದರೆ ಇಡೀ ಕಥೆಯೇ ನನ್ನ ಮೇಲೆ ನಡೆಯುತ್ತದೆ. ನನ್ನ ಪಾತ್ರಕ್ಕೆ ವಿಶೇಷ ಮಹತ್ವವಿದೆ. ಅದೊಂದು ವಿಶೇಷ ದೃಶ್ಯವಿದೆ, ಅದನ್ನು ನೋಡಿದರೆ ನೀವೆಲ್ಲಾ ಬೆಚ್ಚಿ ಬೀಳುತ್ತೀರಿ. ಅಂತಹಾ ವಿಶೇಷ ಕಥೆ ಇರುವ ಸಿನಿಮಾ ಇದು. ನಾನು ಈ ಚಿತ್ರದಲ್ಲಿ ಕುಂಟೆಬಿಲ್ಲೆ, ವಾಲಿಬಾಲ್ ಸೇರಿ ವಿವಿಧ ಆಟಗಳನ್ನು ಆಡಿದ್ದೇನೆ” ಎನ್ನುತ್ತಾರೆ.

ಜೀವಿತಾ ಕ್ರಿಯೇಷನ್ ​​ಜಿಬಿಎಸ್ ನಿರ್ಮಾಣದಲ್ಲಿ ಎಸ್ ಬಿ ಶಿವ, ಕುಮಾರ ಗೌಡ ಜಿ ನಿರ್ಮಾಣ ಮಾಡಿದ್ದು ಚಿತ್ರಕ್ಕೆ ಬಿಎ ಮಧು ಸಂಭಾಷಣೆಯಿದೆ. ಹರಿಕಾವ್ಯ ಸಂಗೀತದಲ್ಲಿ ಮೂರು ಹಾಡಿದ್ದು ಮುಂಜಾನೆ ಮಂಜು ಛಾಯಾಗ್ರಹಣವಿದೆ. ಯದು, ಮೇಘಶ್ರೀ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಸುಧಾಬೆಳವಾಡಿ, ಶಂಕರ ಅಶ್ವಥ್, ಬಾಲರಾಜವಾಡಿ, ಭವಾನಿ ಪ್ರಕಾಶ್, ಕಾವ್ಯ ಮೊದಲಾದವರು ಅಭಿನಯಿಸಿದ್ದಾರೆ.

error: Content is protected !!