ಹಾಸನ: ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವ ಭಿನ್ನರ ತಂಡದ ನಿರ್ದೇಶಕರನ್ನು ಕಾರ್ಯಕಾರಿ ಸಮಿತಿ ಸಭೆಯಿಂದ ಹೊರಗಿಡಲು ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಆಡಳಿತ ಮಂಡಳಿ ತಂತ್ರಗಾರಿಕೆ ಆರಂಭಿಸಿದ್ದು ಮೂವರು ಪ್ರಭಾವಿ ನಿರ್ದೇಶಕನ್ನು ಸ್ವಹಿತಾಸಕ್ತಿ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.
ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಮೂವರು ನಿರ್ದೇಶಕರು ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಅಮಾನತ್ತಿಗೆ ಗುರಿಯಾಗಿದ್ದಾರೆ.
ಸಂಘದ ಅಧ್ಯಕ್ಷ ಆರ್.ಟಿ. ದೇವೇಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದಂತೆ, ನಿರ್ದೇಶಕರಾದ ಡಾ. ಅರವಿಂದ್, ಎಸ್.ಜಿ. ಶ್ರೀಧರ್ ಹಾಗೂ ಜಿ.ಆರ್. ಶ್ರೀನಿವಾಸ್ ಅವರನ್ನು ತಾತ್ಕಾಲಿಕವಾಗಿ ಅಮಾನತ್ತು ಮಾಡಲಾಗಿದೆ.
ಸಂಸ್ಥೆಯ ನಿಯಮಾವಳಿಯ ಪ್ರಕಾರ ನಿರ್ದೇಶಕರು ಸಂಸ್ಥೆಗೆ ಸೇರಿದ ಕಟ್ಟಡಗಳಲ್ಲಿ ಬಾಡಿಗೇದಾರರು ಅಥವಾ ಫಲಾನುಭವಿಗಳಾಗಿರಬಾರದು ಎಂಬ ಸ್ಪಷ್ಟ ನಿಯಮವಿದೆ. ಆದರೆ ಪರಿಶೀಲನೆ ವೇಳೆ—
- ಸಂಸ್ಥೆಯ ಸಿಟಿ ಬಸ್ ನಿಲ್ದಾಣದ ಮುಂಭಾಗವಿರುವ ವಿದ್ಯಾ ಭವನ ಕಟ್ಟಡದಲ್ಲಿ ಡಾ. ಅರವಿಂದ್ ಅವರು ಒಂದು ಕೊಠಡಿಯನ್ನು ಬಾಡಿಗೆ ಪಡೆದು, ಅದನ್ನು ಹೆಚ್ಚಿನ ಮೊತ್ತಕ್ಕೆ ಬೇರೆಯವರಿಗೆ ಬಾಡಿಗೆ ನೀಡಿರುವುದು ಸಾಬೀತಾಗಿದೆ.
- ಅದೇ ಕಟ್ಟಡದಲ್ಲಿ ಜಿ.ಆರ್. ಶ್ರೀನಿವಾಸ್ ಅವರು “ಜಿಆರ್ಆರ್” ಹೆಸರಿನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದು, ಸಂಸ್ಥೆಗೆ ಕಟ್ಟಬೇಕಾದ ₹1 ಕೋಟಿ ಕ್ಕೂ ಹೆಚ್ಚು ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿದ್ದಾರೆ.
- ಎಸ್.ಜಿ. ಶ್ರೀಧರ್ ಅವರು ಅದೇ ಕಟ್ಟಡದಲ್ಲಿ ಬಾಡಿಗೆದಾರರಾದ ಎಸ್.ವಿ. ಗುಂಡುರಾವ್ ಅಂಡ್ ಕೋ ಸಂಸ್ಥೆಯ ಪಾಲುದಾರರಾಗಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಸಂಘದ ಸದಸ್ಯರಿಂದ ಬಂದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ನಿಯಮ ಉಲ್ಲಂಘನೆ ಸ್ಪಷ್ಟವಾಗಿರುವುದರಿಂದ, ಮೂವರನ್ನೂ ಮುಂದಿನ ಆದೇಶದವರೆಗೆ ಅಮಾನತ್ತು ಮಾಡಲಾಗಿದೆ. ಈ ಅವಧಿಯಲ್ಲಿ ಸೋಮವಾರ ನಡೆಯುವ ಕಾರ್ಯಕಾರಿ ಸಮಿತಿ ಸಭೆ ಸೇರಿದಂತೆ ಸಂಸ್ಥೆಯ ಯಾವುದೇ ಸಭೆ/ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಸೂಚನೆ ನೀಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.










