ಪ್ರತಿಯೊಬ್ಬರೂ ನಾಡು, ನುಡಿ, ದೇಶಾಭಿಮಾನ ತಿಳಿಯಬೇಕು: ತಾಲ್ಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಟಿ. ಆರ್. ಆನಂದ್

ಆಲೂರು: ಪ್ರತಿಯೊಬ್ಬರೂ ನಾಡು, ನುಡಿ, ದೇಶಾಭಿಮಾನ ತಳೆಯಬೇಕು. ನಾನು, ನನ್ನದು ಎನ್ನುವುದಕ್ಕಿಂತಲೂ ನಾವು, ನಮ್ಮದು ಎಂಬ ಭಾವ ಮೂಡಬೇಕು. ಜನ್ಮನೀಡಿದ ತಾಯಿ, ಭೂಮಿತಾಯಿಯ ಋಣವನ್ನು ಎಂದಿಗೂ ತೀರಿಸಲಾಗದು ಎಂದು ಆಲೂರು ತಾಲ್ಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಟಿ.ಆರ್. ಆನಂದ್ ಅಭಿಪ್ರಾಯಪಟ್ಟರು.

ಅವರು ತಾಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹದಿನೈದು ಸಾವಿರ ವೆಚ್ಚದಲ್ಲಿ ತಾವೇ ದೇಣಿಗೆಯಾಗಿ ವೇದಿಕೆ ನಿರ್ಮಿಸಿ ಶಾಲೆಗೆ ಸಮರ್ಪಿಸಿ ಮಾತನಾಡಿ ಒಂದು ಸಮುದಾಯ ಮನಸ್ಸು ಮಾಡಿದರೆ ಆಯಾ ಊರಿನ ಸರಕಾರಿ ಶಾಲೆಗಳು ಸರ್ವಾಂಗೀಣ ಅಭಿವೃದ್ಧಿಯಾಗುತ್ತವೆ. ಇಂದಿನ ಯುವಜನತೆ, ಗ್ರಾಮಸ್ತರು ಹಾಗೂ ಆಯಾ ಶಾಲೆಗಳ ಹಳೆಯ ವಿದ್ಯಾರ್ಥಿಗಳು ತನು ಮನ ಧನವರ್ಪಿಸಿ ಶಾಲಾಭಿವೃದ್ಧಿಯ ಬಗ್ಗೆ ಗಮನ ಹರಿಸಿದರೆ ಯಾವ ಖಾಸಗಿ ಶಾಲೆಗಳಿಗೂ ಕಡಿಮೆಯಿಲ್ಲದಂತಹ ಕಲಿಕೆ ಸರಕಾರಿ ಶಾಲೆಗಳಲ್ಲಿಯೂ ಆಗುತ್ತದೆ. ನಾನು ಹುಟ್ಟಿದ ಊರಿನ ಶಾಲೆಗೆ ನನ್ನ ಕೈಯಿಂದಾದ ಅಳಿಲು ಸೇವೆಯನ್ನು ಮಾಡಿದ್ದೇನೆ. ಇದು ನನಗೆ ತುಂಬಾ ಖುಷಿಕೊಟ್ಟಿದೆ ಎಂದರು.

ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಟಿ.ಕೆ.ದಿನೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿ ಸ್ನೇಹಿತರೆಲ್ಲರ ಸಹಕಾರದಿಂದ ಈ ವರ್ಷ ಅರ್ಥಪೂರ್ಣವಾಗಿ ಕಾರ್ಯಕ್ರಮದ ಆಯೋಜನೆಯಾಗಿದೆ. ಎಲ್ಲರ ಸಹಕಾರದಿಂದ ಈ ವರ್ಷದ ಆಚರಣೆಗೆ ಗ್ರಾಮದ ಮುಖಂಡರು, ಹಳೆಯ ವಿದ್ಯಾರ್ಥಿಗಳ ಸಂಘ, ಗ್ರಾಮ ಪಂಚಾಯಿತಿ ಸದಸ್ಯರು ಎಲ್ಲರೂ ತಮ್ಮಿಂದಾದ ಸಹಾಕಾರ ನೀಡಿದ್ದಾರೆ. ಹೀಗೆಯೇ ಎಲ್ಲರೂ ಕೈಜೋಡಿಸಿದಲ್ಲಿ ಶಾಲೆಯ ರಜತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಪ್ರಯತ್ನಿಸೋಣ ಎಂದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಸುನಂದ ಯೋಗೇಶ್, ಉಷಾ ಹರೀಶ್ ಹಾಗೂ ಷಡಾಕ್ಷರಿ ಅವರುಗಳು ಶಾಲೆಯ ಹದಿನೆಂಟು ವಿದ್ಯಾರ್ಥಿಗಳಿಗೆ ಸಮವಸ್ತçಗಳನ್ನು ದೇಣಿಗೆಯಾಗಿ ನೀಡಿದರು. ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಧರ್ಮ ಟಿ.ಇ. ಶಾಲೆಗೆ ಆರು ಛೇರ್‌ಗಳನ್ನು ದೇಣಿಗೆಯಾಗಿ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಕೊಟ್ರೇಶ್.ಎಸ್. ಉಪ್ಪಾರ್, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಟಿ.ಬಿ.ರಾಜಶೇಖರ್, ಸದಸ್ಯರಾದ ಯೋಗೇಶ ಟಿ.ಎಚ್., ಮಧು ಟಿ.ಸಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವೆಂಕಟೇಶ್ ಜಿಕೆ, ಕಾರ್ಯದರ್ಶಿ ಧರ್ಮ ಟಿ.ಇ. ಸೇರಿದಂತೆ ಹಲವರು ಮಾತನಾಡಿದರು.

ವೇದಿಕೆಯಲ್ಲಿ ದಾನಿಗಳಾದ ಟಿ.ಆರ್. ಆನಂದ್, ಗ್ರಾ.ಪಂ. ಯೋಗೇಶ ಟಿ.ಎಚ್, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಧರ್ಮ ಟಿ.ಇ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯ ಮಹೇಶ ಟಿ.ಎಂ. ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ಜಿ.ಟಿ.ಸುರೇಶ್, ಸಹಾಯಕ ಕುಪ್ಪೆ ಸ್ವಾಮಿ, ತಾಳೂರು ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಮಂಜುನಾಥ, ಟಿ.ಕೆ. ಚಿದಾನಂದ, ಚಂದ್ರಮ್ಮ ಹಲವರು ಉಪಸ್ಥಿತರಿದ್ದರು.