ಹಾಸನ: ಜಿಲ್ಲಾ ವಿಶ್ವಕರ್ಮ ಸಮಾಜ (ರಿ.) ಅಧ್ಯಕ್ಷ ಹೆಚ್.ವಿ. ಹರೀಶ್ ಅವರು, ಕ್ರಿಶ್ಚಿಯನ್ ಹೆಸರಿನಲ್ಲಿ ಹಿಂದೂ ಜಾತಿಗಳ ವಿಭಜನೆಯಿಂದ ಗೊಂದಲ ಉಂಟಾಗುತ್ತಿರುವ ಹಿನ್ನೆಲೆ “ವಿಶ್ವಕರ್ಮ ಕ್ರಿಶ್ಚಿಯನ್” ಎಂಬ ಉಪವರ್ಗವನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಇದೇ ತಿಂಗಳ 22ರಿಂದ ಆರಂಭವಾಗಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಸಂದರ್ಭದಲ್ಲಿ ಸಮಾಜದ ಭಾಂದವರು ಯಾವುದೇ ಉಪಜಾತಿ ಹೆಸರನ್ನು ಬರೆಸದೇ ಕೇವಲ ‘ವಿಶ್ವಕರ್ಮ’ ಎಂದು ಮಾತ್ರ ದಾಖಲಿಸುವಂತೆ ಮನವಿ ಮಾಡಲಾಗಿದೆ.
ಸಮಾಜದ ಪರವಾಗಿ ನೀಡಿದ ಪ್ರಕಟಣೆಯಲ್ಲಿ, “ಉಪ ಜಾತಿ ವಿಭಜನೆಗಳಿಂದ ವಿಶ್ವಕರ್ಮ ಸಮುದಾಯದ ಏಕತೆ ಹಾಳಾಗಬಾರದು. ಗಣತಿದಾರರು ಮನೆಗೆ ಬಂದಾಗ ಕಡ್ಡಾಯವಾಗಿ ವಿಶ್ವಕರ್ಮ ಎಂಬ ಒಂದೇ ಹೆಸರು ನಮೂದಿಸಬೇಕು” ಎಂದು ಅಧ್ಯಕ್ಷ ಹರೀಶ್ ಕರೆ ನೀಡಿದ್ದಾರೆ.










