ಚನ್ನರಾಯಪಟ್ಟಣ: ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದೇವತೆ ಶ್ರೀ ಶೆಟ್ಟಿಹಳ್ಳಮ್ಮ ದೇಗುಲದ ಬೀಗ ಒಡೆದು ಖದೀಮರು ಕಳ್ಳತನ ನಡೆಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಭಾನುವಾರ ಬೆಳಗಿನ ಜಾವ ಸುಮಾರಿನಲ್ಲಿ ಕಬ್ಬಿಣದ ರಾಡಿನಿಂದ ಮುಖ್ಯ ಬಾಗಿಲಿನ ಬೀಗ ಒಡೆದು ಒಳ ನುಗ್ಗಿರುವ ಖದೀಮರು ಇತರೆ ಸಲಕರಣೆಯಿಂದ ಹುಂಡಿ ಒಡೆದು ಹಣ ದೋಚಿದ್ದಾರೆ.

ಶೂ ಹಾಗೂ ಚಪ್ಪಲಿಗಳನ್ನು ಹಾಕಿಕೊಂಡೆ ಗರ್ಭಗುಡಿಗೂ ಪ್ರವೇಶಿಸಿರುವ ಖದೀಮರು ಮೂರ್ತಿಯಲ್ಲಿ ಒಡವೆಗಳಿಗಾಗಿ ಹುಡುಕಾಟ ನಡೆಸಿರುವುದು ಕಂಡುಬಂದಿದೆ.
ಕೆಲ ತಿಂಗಳ ಹಿಂದೆ ಕಳ್ಳನೊಬ್ಬ ದೇಗುಲ ನುಗ್ಗಲು ಯತ್ನಿಸಿ ಗ್ರಾಮಸ್ಥರ ಕೈಗೆ ಸಿಕ್ಕಿಕೊಂಡಿದ್ದ. ಹಾಗಾಗ್ಗೆ ಕಳ್ಳತನ ಆಗುವುದನ್ನು ಮನಗಂಡ ಗ್ರಾಮಸ್ಥರು ಇತ್ತೀಚಿಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದರು.
ದೇಗುಲವು ಏಳು ಗ್ರಾಮಗಳ ಬುಡಕಟ್ಟಿಗೆ ಸೇರಿದ್ದು ಹೊರ ಜಿಲ್ಲೆಗಳಿಂದಲೂ ಕೂಡ ಭಕ್ತರು ಆಗಮಿಸುವುದು ವಿಶೇಷವಾಗಿದೆ. ಪ್ರತಿದಿನ ಪೂಜಾ ಕೈಂಕರ್ಯಗಳು ನಡೆಯುತ್ತವೆ. ನೂರಾರು ಭಕ್ತರು ಆಗಮಿಸುತ್ತಾರೆ.
ಇದರಿಂದ ಹುಂಡಿಯಲ್ಲಿ ಹೆಚ್ಚಿನ ಹಣ ಸಂಗ್ರಹವಾಗಿರಬಹುದೆಂದು ತಿಳಿದ ಖದೀಮರು ಕಳ್ಳತನ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ತನಿಖೆ ಕೈಗೊಂಡಿದ್ದಾರೆ.










