ಚನ್ನರಾಯಪಟ್ಟಣ: ತಾಲ್ಲೂಕಿನ ಹಿರೀಸಾವೆ ಗ್ರಾಮದಲ್ಲಿ ಸಿರವಿ ಸಮಾಜದ ವತಿಯಿಂದ ಶ್ರೀ ಆಯಿ ಮಾತಾ(ಶ್ರೀ ಚಾಮುಂಡೇಶ್ವರಿ ಅವತಾರ) ದೇವಿಯ ಎತ್ತಿನ ಬಂಡಿ ಉತ್ಸವ ಹಾಗೂ ವಿಶೇಷ ಪೂಜೆ ಶನಿವಾರ ವಿಜೃಂಭಣೆಯಿಂದ ನಡೆಯಿತು.
ನೂರಾರು ವರ್ಷಗಳ ಹಿಂದೆಯೇ ರಾಜಸ್ಥಾನ್ ರಾಜ್ಯದ ಜೋಡುಪುರ್ ಜಿಲ್ಲೆಯ ಬಿಲ್ಲಾಡ ಗ್ರಾಮದಿಂದ ಆಗಮಿಸಿ ತಾಲ್ಲೂಕಿನ ಹಿರೀಸಾವೆ ಗ್ರಾಮದಲ್ಲಿ ಸಿರವಿ ಸಮುದಾಯದ 17 ಕುಟುಂಬಗಳು ನೆಲೆಸಿದ್ದು ಗ್ರಾಮದೇವತೆ ಶ್ರೀ ಆಯಿ ಮಾತಾ ದೇವಿಯನ್ನು ಇಲ್ಲಿಗೆ ಇದೇ ಮೊದಲ ಬಾರಿಗೆ ಕರೆ ತಂದಿರುವುದು ವಿಶೇಷವಾಗಿದೆ.
ಸುಮಾರು 1,850 ಕಿಮೀ ದೂರದ ರಾಜಸ್ಥಾನದಿಂದ ದೇವಿಯನ್ನು ಬಸ್ಸಿನಲ್ಲಿ ಹಿರೀಸಾವೆ ಗ್ರಾಮಕ್ಕೆ ಕರೆತರಲಾಗಿದ್ದು ಅಲ್ಲಿಂದಲೇ ಬಸ್ಸಿನಲ್ಲಿ ಕರೆತರಲಾಗಿದ್ದ ಎತ್ತಿನ ಬಂಡಿಯಲ್ಲಿ ಉತ್ಸವ ಮಾಡಲಾಯಿತು.
ಹಿನ್ನೆಲೆಯಲ್ಲಿ ಮುಂಜಾನೆಯೇ ಸಮುದಾಯ ಭವನಕ್ಕೆ ಹಸಿರು ಚಪ್ಪರ ಹಾಕಲಾಗಿದ್ದು ತಳಿರು ತೋರಣ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಲಾಗಿತ್ತು.
ಸಿರವಿ ಸಮುದಾಯದ ಹೆಣ್ಣು ಮಕ್ಕಳು ಕಳಸ ಹೊತ್ತು ಶ್ರೀ ಚಾಮುಂಡೇಶ್ವರಿ ದೇವಿಯ ಅವತಾರ ಎನ್ನಲಾದ ಶ್ರೀ ಆಯಿ ಮಾತಾ ದೇವಿಯನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು.
ಸಿರವಿ ಸಮುದಾಯ ಭವನದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಶೀರ್ವಾದ ಪಡೆದರು. ಸೋಬಾನೆ ಪದ, ಭಜನೆ ನಂತರ ಮಹಾಮಂಗಳಾರತಿ ಬೆಳಗಿಸಲಾಯಿತು. ಅನ್ನದಾಸೋಹ ನಡೆಯಿತು.
ಸಿರವಿ ಸಮಾಜದ ಅಧ್ಯಕ್ಷ ನಾರಾಯಣ್ ಲಾಲ್, ಸಚಿವ ತೇಜಾ ರಾಮ್, ಖಜಾಂಚಿ ರಮೇಶ್ ಧಾತ, ಪ್ರಮುಖರಾದ ಈಶ್ವರ್ ಗುರ್ಜರ್, ಮೂಳಾ ರಾಮ್, ಚೇನಾ ರಾಂ, ತೇಜಾ ರಾಮ್, ಓಂ ಪ್ರಕಾಶ್ ಸಿರವಿ, ಮನೋಹರ್ ಲಾಲ್, ಸಂದೀಪ್ ಬಿ. ದೇಶಮುಖ್, ಪುರುಷೋತ್ತಮ್ ಸಿರವಿ, ತೇಜಾ ರಾಮ್, ರಮೇಶ್ ಸಿರವಿ ದಾತ, ರಾಜು ಜೀ ಪುರೋಹಿತ್, ಹಿರಲಾಲ್ ಕಲಾಲ್, ಹಿರಲಾಲ್ ಸಿರವಿ, ದಿನೇಶ್ ಲಾಲ್ ಕಾಯಕ್ ಹಾಗೂ ಸಿರವಿ ಸಮಾಜದ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.
bullock cart festival and special puja of Goddess Sri Aai Mata (Sri Chamundeshwari avatar) was held with great pomp and show on Saturday in Hirisave village of Channarayapatna taluk by the Siravi Samaj.










