ಆಲೂರು : ಭಾರತ್ ಸ್ಕೌಟ್ಸ್ & ಗೈಡ್ಸ್ ಮಕ್ಕಳ ವ್ಯಕ್ತಿತ್ವ ವಿಕಸನಗೊಳಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕಬ್ಸ್ ಬುಲ್ಬುಲ್ಸ್ ಗಳಿಗಾಗಿ ಹಮ್ಮಿಕೊಂಡ ಕೃಷ್ಣ ರಾಧೆಯರ ವೇಷಭೂಷಣ ಸ್ಪರ್ಧೆಯಲ್ಲಿ ಪಾತ್ರಧಾರಿಗಳಾದ ಮಕ್ಕಳಲ್ಲಿ ಕೃಷ್ಣನ ವ್ಯಕ್ತಿತ್ವದ ಪ್ರತಿಫಲನಗಳನ್ನುಂಟು ಮಾಡುತ್ತವೆ ಎಂದು ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷೆ ಎಂ. ಬಿ. ಗಿರಿಜಾಂಬಿಕ ಅಭಿಪ್ರಾಯಪಟ್ಟರು.
ಅವರು ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ವತಿಯಿಂದ ಬೈರಾಪುರ ಎಸ್.ವಿ. ಪಬ್ಲಿಕ್ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಹಮ್ಮಿಕೊಂಡಿದ್ದ “ಕೃಷ್ಣ-ರಾಧೆಯರ ವೇಷಭೂಷಣ ಸ್ಪರ್ಧೆ”ಯನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆ ಬೋಧಿಸಿದ ಶ್ರೇಷ್ಠ ವ್ಯಕ್ತಿತ್ವದ ಶ್ರೀಕೃಷ್ಣನನ್ನು ನೆನೆಯುವ ಸುದಿನ ಇದಾಗಿದ್ದು, ಕಬ್ಸ್ ಮಕ್ಕಳೆಲ್ಲಾ ಕೃಷ್ಣನ ಪಾತ್ರದಲ್ಲಿ, ಬುಲ್ಬುಲ್ಸ್ ಮಕ್ಕಳು ರಾಧೆ ಪಾತ್ರದಲ್ಲಿ ತುಂಬಾ ಸುಂದರವಾದ ವೇಷಭೂಷಣ ಧರಿಸಿಕೊಂಡು ಪ್ರದರ್ಶನ ಮಾಡಿದ್ದಾರೆ, ಸಂಭ್ರಮಿಸಿದ್ದಾರೆ. ಬಾಲ ಕೃಷ್ಣ-ರಾಧೆಯರಂತೆ ಕಂಗೊಳಿಸುತ್ತಿದ್ದಾರೆ. ಪೋಷಕರಿಗೂ ಮಕ್ಕಳನ್ನು ಈ ವೇಷದಲ್ಲಿ ತಮ್ಮ ಮಕ್ಕಳನ್ನು ನೋಡುವ ಆನಂದಕ್ಕೆ ಪಾರವೇಯಿಲ್ಲ. ದಿನಕ್ಕೊಂದು ಒಳ್ಳೆಯ ಕೆಲಸವನ್ನು ಮಾಡುತ್ತಾ ಮಕ್ಕಳು ಆದರ್ಶ ಬದುಕನ್ನು ಮುನ್ನೆಡೆಸಬೇಕು ಎಂದರು.
ಎಸ್.ವಿ. ಪಬ್ಲಿಕ್ ಶಾಲೆಯ ಮುಖ್ಯಸ್ಥರಾದ ಬಿ.ಜಿ.ಗಿರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀಕೃಷ್ಣನು ಬೋಧಿಸಿದ ಮಾನವೀಯ ಮೌಲ್ಯಗಳು ಸಾರ್ವಕಾಲಿಕವಾದದ್ದು. ಮಾನವ ಧರ್ಮ ರಕ್ಷಣೆಗಾಗಿ ಅವತರಿಸಿದ ಶ್ರೀಕೃಷ್ಣ ಭಗವದೀತೆ ಇಂದಿಗೂ ನ್ಯಾಯಾಲಯಗಳಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿದ್ದು. ಇದೊಂದು ಸರ್ವಶ್ರೇಷ್ಠ ಗ್ರಂಥವಾಗಿದೆ. ಇಂತಹ ಅಮೂಲ್ಯ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಳ್ಳುವುದರ ಮೂಲಕ ಮಕ್ಕಳಿಗೆ ವೇಷಭೂಷಣ ಹಾಕಿಸಿ ಅವರ ವ್ಯಕ್ತಿತ್ವದ ಬಗ್ಗೆ ಅರಿವು ಮೂಡಿಸುವಂತಹ ಸುಸಂದರ್ಭವನ್ನು ಸೃಷ್ಠಿಸಿಕೊಟ್ಟ ತಾಲ್ಲೂಕು ಸಮಿತಿಯನ್ನು ಸ್ಮರಿಸುತ್ತೇನೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ, ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಕಬ್ ಮಾಸ್ಟರ್ ದೇವರಾಜ್, ಸ್ಕೌಟ್ ಮಾಸ್ಟರ್ ಸತೀಶ್, ಗೈಡ್ಸ ಕ್ಯಾಪ್ಟನ್ ಸುಮಿತ್ರ, ಗೈಡ್ ಕ್ಯಾಪ್ಟನ್ ಪೃಥ್ವಿನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.










