ಹಾಸನ: ನಗರದ ಅರಳೇಪೇಟೆ ರಸ್ತೆ ಬಳಿ ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಷ್ಠಾಪಿಸಲಾಗುವ ಪಾಂಚಜನ್ಯ ಗಣೇಶೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳಿಗೆ ಶಾಸ್ತ್ರೋಕ್ತವಾಗಿ ಧ್ವಜ ಪೂಜೆ ಹಾಗೂ ಗೋವು ಪೂಜೆ ಮಾಡುವುದರ ಮೂಲಕ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ.ಜೆ.ಗೌಡ ನೇತೃತ್ವದಲ್ಲಿ ಚಾಲನೆ ಕೊಡಲಾಯಿತು.
ಈ ವೇಳೆ ಮಾತನಾಡಿದ ಪಾಂಚಜನ್ಯ ಗಣಪತಿ ಸಮಿತಿ ಕಾರ್ಯದರ್ಶಿ ವೇಣುಗೋಪಾಲ್, ಸಮಿತಿಯಿಂದ ಆ.೨೭ ರಿಂದ ಸೆ.೩ ರ ವರೆಗೂ ಭವ್ಯವಾದ ಗಣೇಶೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏಳು ದಿನ ವಿವಿಧ ಕಾರ್ಯಕ್ರಮ ನಡೆಯಲಿವೆ. ಅದಕ್ಕಾಗಿ ಇಂದು ಧ್ವಜ ಹಾಗೂ ಗೋವು ಪೂಜೆ ಮಾಡುವುದರ ಮೂಲಕ ಹಿರಿಯರ ಸಮ್ಮುಖದಲ್ಲಿ ಚಾಲನೆ ಕೊಡಲಾಗಿದೆ ಎಂದರು.
ಆದರೆ ರಾಜ್ಯ ಸರಕಾರ ಗಣೇಶೋತ್ಸವ ಹುಮ್ಮಸ್ಸನ್ನು ಕಡಿಮೆ ಮಾಡಲು ಸರ್ವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು. ಗಣೇಶ ಉತ್ಸವದಲ್ಲಿ ಡಿಜೆ ಬ್ಯಾನ್ ಮಾಡಬೇಕು ಎನ್ನುವ ಹುನ್ನಾರ, ಫ್ಲೆಕ್ಸ್ ಪ್ರಕಟಕ್ಕೂ ಮುನ್ನವೇ ಪೊಲೀಸ್ ಅನುಮತಿ ಪಡೆಯಬೇಕು ಎಂದು ಷರತ್ತು ವಿಧಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದೂ ಕಾರ್ಯಕರ್ತರ ಸ್ವಾತಂತ್ರ್ಯ ಕಸಿಯಲಾಗಿದೆ ಎಂಬ ಆರೋಪ ಇದೆ. ಕಾಂಗ್ರೆಸ್ ಸರಕಾರ ಹಿಂದೂಗಳು ಶಾಂತಿಯಿಂದ, ನೆಮ್ಮದಿಯಿಂದ ಗಣೇಶೋತ್ಸವ ಮಾಡಲು ಸರಕಾರ ಅನೇಕ ತಡೆ ಮಾಡುತ್ತಿದೆ ಎಂದು ದೂರಿದರು. ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಿ ನಿಬಂಧನೆ ಸಡಿಲ ಮಾಡಿ, ಅದ್ಧೂರಿಯಾಗಿ ಗಣೇಶ ಉತ್ಸವ ಆಚರಿಸಲು ಅವಕಾಶ ಮಾಡಿಕೊಡಬೇಕಾಗಿ ಮನವಿ ಮಾಡಿದರು.
ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಸಾಧ್ಯವಾದಷ್ಟು ಪ್ಲೆಕ್ಸ್ ಗಳನ್ನು ಕಡಿಮೆ ಮಾಡಲಾಗುವುದು. ಬಟ್ಟೆ ಬಾವುಟ, ಬ್ಯಾನರ್ ಉಪಯೋಗಿಸುತ್ತೇವೆ. ಸಾಧ್ಯವಾದಷ್ಟು ಕಡಿಮೆ ಮಾಡಲಾಗುವುದು. ಈ ವೇಳೆ ಪಾಂಚಜನ್ಯ ಗಣಪತಿ ಸಮಿತಿ ಅಧ್ಯಕ್ಷ ವಾಸು, ಗೌರವಾಧ್ಯಕ್ಷ ದಯಾನಂದ್, ಹಿಂದೂ ಜಾಗರಣ ವೇದಿಕೆಯ ಲೋಕೇಶ್, ವಿಹೆಚ್ಪಿ ವಿಭಾಗೀಯ ಕಾರ್ಯದರ್ಶಿ ಮಹಿಪಾಲ್, ಕಂಚಮಾರನಹಳ್ಳಿ ಕಾಂತಣ್ಣ, ವಿಜಿ ಕುಮಾರ್, ಮಹೇಶ್, ಲಾವಣ್ಯ, ಶ್ವೇತಾ, ಅನಿತಾ ಇತರರಿದ್ದರು.










