ಹಾಸನ, ಜುಲೈ 4: ಹಾಸನ ತಾಲೂಕಿನ ಚಿಕ್ಕಕೊಂಡಗೊಳದ ಯುವಕ ಮದನ್ (25) ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಸಂಬಂಧ ಆರೋಗ್ಯ ಇಲಾಖೆ ಆತನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು ಆತ ಮದ್ಯ ವ್ಯಸನಿಯಾಗಿದ್ದ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಮದನ್ನ ಬಾವ ಚಂದನ್ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಮದನ್ ಕಾಲೇಜು ಶಿಕ್ಷಣವನ್ನು ಮೊಟಕುಗೊಳಿಸಿದ್ದು, ಪ್ರತಿನಿತ್ಯ ಮದ್ಯ ಸೇವನೆಗೆ ಒಳಗಾಗಿದ್ದ. ಒಂದು ವಾರದ ಹಿಂದೆ ಗ್ಯಾಸ್ಟ್ರಿಕ್ಗೆ ಸಂಬಂಧಿಸಿದ ಎದೆನೋವಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ವೈದ್ಯರು ಮದ್ಯ ಸೇವನೆಯನ್ನು ತಡೆಗಟ್ಟುವಂತೆ ಸೂಚಿಸಿದ್ದರೂ, ಮದನ್ ಅತಿಯಾಗಿ ಮದ್ಯ ಸೇವಿಸುತ್ತಿದ್ದ. ಕಳೆದ ಮೂರು ದಿನಗಳಿಂದ ಮನೆಗೆ ಬಾರದೆ, ಊಟ-ತಿಂಡಿಯಿಲ್ಲದೆ ಮದ್ಯ ಸೇವನೆಯಲ್ಲೇ ಕಾಲ ಕಳೆಯುತ್ತಿದ್ದ ಎಂದು ಚಂದನ್ ತಿಳಿಸಿದ್ದಾರೆ.
ಗುರುವಾರ ರಾತ್ರಿ ಎದೆನೋವಿನ ಕುರಿತು ಚಂದನ್ಗೆ ಕರೆ ಮಾಡಿದ್ದ ಮದನ್, ಬೈಕ್ನಲ್ಲಿ ಚಿಕ್ಕಕೊಂಡಗೊಳದಿಂದ ಹೊರಟಿದ್ದ. ಆದರೆ, ತಮ್ಲಾಪುರ ಸರ್ಕಲ್ನಲ್ಲಿ ಬೈಕ್ ನಿಲ್ಲಿಸಿ ಕುಸಿದು ಬಿದ್ದಿದ್ದಾನೆ. ಎದೆನೋವು ತೀವ್ರಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಚಂದನ್ ಆತನನ್ನು ಆಸ್ಪತ್ರೆಗೆ ಕರೆದೊಯ್ದಾಗ, ವೈದ್ಯರು ಮದನ್ ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಶುಕ್ರವಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನಿಲ್ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ, ಹೃದಯಾಘಾತದ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಗೆ ಸೂಚಿಸಿದ್ದರು. ಆದರೆ, ಒಬ್ಬನೇ ಮಗನ ಸಾವಿನಿಂದ ದು:ಖದಲ್ಲಿದ್ದ ತಾಯಿ ಹಾಗೂ ಕುಟುಂಬಸ್ಥರು ಮರಣೋತ್ತರ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ, ಡಿಎಚ್ಒ ವಾಪಸ್ ಆಗಿದ್ದಾರೆ ಎಂದು ಚಂದನ್ ಹೇಳಿದ್ದಾರೆ.
ಈ ಘಟನೆಯಿಂದ ಮದನ್ನ ಕುಟುಂಬದವರು ಆಘಾತದಲ್ಲಿದ್ದು, ಸ್ಥಳೀಯರಲ್ಲಿ ದಿಗ್ಭ್ರಮೆ ಮೂಡಿದೆ.










