ಶ್ರವಣಬೆಳಗೊಳ: ದಶಲಕ್ಷಣ ಮಹಾಪರ್ವದ ಅನಂತನೋಂಪಿ ಹಾಗೂ ಕ್ಷಮಾವಾಣಿ ಪ್ರಯುಕ್ತ ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ಸೋಮವಾರ ಬೃಹತ್ ಮೆರವಣಿಗೆ ನೆರವೇರಿತು. ಶ್ರೀ ದಿಗಂಬಬರ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಚಾಲನೆ ನೀಡಿದರು.
ಸ್ವರ್ಣ ರಥದಲ್ಲಿ 14 ನೇ ತೀರ್ಥಂಕರರಾದ ಶ್ರೀ ಅನಂತನಾಥಸ್ವಾಮಿ, ಯಕ್ಷ-ಯಕ್ಷಿ, ಶ್ರೀ ಬ್ರಹ್ಮದೇವರನ್ನು ಪ್ರತಿಷ್ಠಾಪಿಸಿ ಹಾಗೂ ಜಿನವಾಣಿ ಶಾಸ್ತ್ರಗಳನ್ನು ರಜತ ಪಲ್ಲಕ್ಕಿಯಲ್ಲಿ ಅಲಂಕರಿಸಿ ಪೂರ್ಣಕುಂಭ, ಮಂಗಳ ವಾದ್ಯ, ಚಂಡೆವಾದ್ಯಗಳೊಂದಿಗೆ ಶ್ರೀಮಠದಿಂದ ಪ್ರಾರಂಭಗೊಂಡು ಭಂಡಾರಿ ಬಸದಿ ಪ್ರದಕ್ಷಿಣೆಯೊಂದಿಗೆ ಶ್ರೀಮಠದ ಬೀದಿ, ಮೈಸೂರು ರಸ್ತೆ, ವಿದ್ಯಾನಂದ ನಿಲಯ ಮಾರ್ಗವಾಗಿ ಚಿಕ್ಕದೇವರಾಜ ಒಡೆಯರ್ ಕಲ್ಯಾಣಿ ರಸ್ತೆ, ಬೆಂಗಳೂರು ರಸ್ತೆ ಮೂಲಕ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನೆರವೇರಿತು. ಮಂಗಳ ಕಲಶ, ಧರ್ಮದ್ವಜ ಹಿಡಿದ ವಿದ್ಯಾರ್ಥಿಗಳು ಹಾಗೂ ನೂರಾರು ಶ್ರಾವಕ – ಶ್ರಾವಕಿಯರು ಜಯಕಾರದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.










