ಹಾಸನ, ಜುಲೈ 11, 2025: ಸಕಲೇಶಪುರ ತಾಲ್ಲೂಕಿನ ಹಾರ್ಲೆಕೂಡಿಗೆ ಬಳಿ ಕುಡಿದ ಮತ್ತಿನಲ್ಲಿ ಸಹೋದರರ ನಡುವೆ ಶುರುವಾದ ಜಗಳವೊಂದು ದಾರುಣ ಕೊಲೆಯಲ್ಲಿ ಅಂತ್ಯಗೊಂಡಿದೆ.
ಜೋಸೆಫ್ ಮಂತೇರಾ (36) ಎಂಬಾತನನ್ನು ಅವನ ಸಹೋದರ ಸುನೀಲ್ ಮಂತೇರಾ (38) ಚಾಕುವಿನಿಂದ ಇರಿದು ಕೊಲೆಗೈದ ಘಟನೆ ರಾತ್ರಿ ನಡೆದಿದೆ.

ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ, ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ತಾರಕಕ್ಕೇರಿದೆ. ಕುಡಿದ ಮತ್ತಿನಲ್ಲಿ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿ, ಸುನೀಲ್ ತನ್ನ ತಮ್ಮ ಜೋಸೆಫ್ನ ತಲೆಗೆ ಚಾಕುವಿನಿಂದ ಇರಿದಿದ್ದಾನೆ.
ಕೊಲೆಯಾದ ಜೋಸೆಫ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆಯ ನಂತರ ಆರೋಪಿ ಸುನೀಲ್ ಘಟನಾಸ್ಥಳದಲ್ಲೇ ಕುಳಿತಿದ್ದ ಎಂದು ತಿಳಿದುಬಂದಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.










