ಹಾಸನ, ಜೂನ್ 22: ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಸಣ್ಣ ವಯಸ್ಸಿನವರು ಬಲಿಯಾಗುತ್ತಿರುವ ಘಟನೆಗಳು ಆತಂಕಕ್ಕೆ ಕಾರಣವಾಗಿರುವ ಬೆನ್ನಲ್ಲೇ ಅಂತಹ ಸಾವಿನ ಸರಣಿ ಮುಂದುವರಿದಿದ್ದು ಶನಿವಾರ ರಾತ್ರಿ 35 ವರ್ಷದ ಮೊಬೈಲ್ ಅಂಗಡಿ ಮಾಲೀಕರೊಬ್ಬರು ಹಾರ್ಟ್ ಅಟ್ಯಾಕ್ (HEART ATTAACK) ಗೆ ಬಲಿಯಾಗಿದ್ದಾರೆ.
ನಗರದ ಸತ್ಯಮಂಗಲ ಬಡಾವಣೆಯಲ್ಲಿ ವಾಸವಾಗಿದ್ದ ಚೇತನ್ (35) ಹೃದಯಾಘಾತದಿಂದ ಮೃತರಾಗಿದ್ದಾರೆ.
ಕಿಕ್ಕೇರಿ ಮೂಲದ ಚೇತನ್, ಹಾಸನದ ಹಳೇ ಬಸ್ ನಿಲ್ದಾಣ ಸಮೀಪ ಮೊಬೈಲ್ ಅಂಗಡಿ ನಡೆಸುತ್ತಿದ್ದರು. ಪತ್ನಿ ಮತ್ತು ಮಗುವಿನೊಂದಿಗೆ ಸತ್ಯಮಂಗಲ ಬಡಾವಣೆಯಲ್ಲಿ ನೆಲೆಸಿದ್ದ ಅವರು, ರಾತ್ರಿ ಊಟಕ್ಕೆ ಕುಳಿತುಕೊಳ್ಳುವ ವೇಳೆ ದಿಢೀರ್ ಎದೆನೋವು ಕಾಣಿಸಿಕೊಂಡಿತು. ಎದೆನೋವಿನ ಬಗ್ಗೆ ತಿಳಿಸಿ ಎದ್ದೇಳುವಾಗಲೇ ಕುಸಿದು ಬಿದ್ದ ಅವರನ್ನು ಪತ್ನಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರೂ, ಅಷ್ಟರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು.










