ಹಾಸನ; ನಾಲೆಯಲ್ಲಿ ಈಜಲು ಹೋಗಿದ್ದ ಮೂವರಲ್ಲಿ ಓರ್ವ ಸಾವನ್ನಪ್ಪಿ, ಇಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಅರಕಲಗೂಡು ತಾಲ್ಲೂಕಿನ, ಅಲ್ಲಪಟ್ಟಣದಲ್ಲಿ ನಡೆದಿದೆ.
ಅಲ್ಲಪಟ್ಟಣದ ಹರೀಶ್ (40) ಮೃತಪಟ್ಟ ವ್ಯಕ್ತಿ. ಬೆಂಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದ ಅವರು ಮಹಾಲಯ ಅಮಾವಾಸ್ಯೆ ಹಬ್ಬದ ಹಿನ್ನೆಲೆಯಲ್ಲಿ ಹಿರಿಯರಿಗೆ ಎಡೆ ಇರಿಸಲು ಪತ್ನಿ, ಇಬ್ಬರು ಮಕ್ಕಳ ಜೊತೆ ಅಲ್ಲಪಟ್ಟಣ ಗ್ರಾಮಕ್ಕೆ ಬಂದಿದ್ದರು.
ಇಂದು ತನ್ನ ಇಬ್ಬರು ಸ್ನೇಹಿತರ ಜತೆ ಹಾರಂಗಿ ನಾಲೆಯಲ್ಲಿ ಈಜಲು ತೆರಳಿದ್ದರು. ನೀರು ವೇಗವಾಗಿ ಹರಿಯುತ್ತಿದ್ದ ಪರಿಣಾಮ ಸರಿಯಾಗಿ ಈಜು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಸ್ನೇಹಿತರಿಬ್ಬರು ಪಾರಾಗಿದ್ದಾರೆ.
ಹರೀಶ್ ಮೃತದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಕೊಣನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.










