14.7 C
Munich
Home News ಡಿಸಿಸಿ ಬ್ಯಾಂಕ್ ಹೆಸರಿನಲ್ಲಿ ಉದ್ಯೋಗ ವಂಚನೆ: ನಕಲಿ ನೇಮಕಾತಿ ಪತ್ರಗಳ ಬಗ್ಗೆ ಎಚ್ಚರಿಕೆ ನೀಡಿದ ಅಧ್ಯಕ್ಷ...

ಡಿಸಿಸಿ ಬ್ಯಾಂಕ್ ಹೆಸರಿನಲ್ಲಿ ಉದ್ಯೋಗ ವಂಚನೆ: ನಕಲಿ ನೇಮಕಾತಿ ಪತ್ರಗಳ ಬಗ್ಗೆ ಎಚ್ಚರಿಕೆ ನೀಡಿದ ಅಧ್ಯಕ್ಷ :ಸೋಮನಹಳ್ಳಿ ನಾಗರಾಜ್

ಹಾಸನ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ಸುದ್ದಿಗೋಷ್ಠಿಯಲ್ಲಿ ನೇಮಕಾತಿ ವಂಚನೆ ಕುರಿತು ಮಾಹಿತಿ ನೀಡುತ್ತಿರುವ ದೃಶ್ಯ
ಡಿಸಿಸಿ ಬ್ಯಾಂಕ್ ಹೆಸರಿನಲ್ಲಿ ಉದ್ಯೋಗ ವಂಚನೆ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್.

ಹಾಸನ ಡಿಸಿಸಿ ಬ್ಯಾಂಕ್ ಯಾವುದೇ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ ಎಂದು ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ಸ್ಪಷ್ಟಪಡಿಸಿದ್ದಾರೆ. ನಕಲಿ ಪ್ರವೇಶ ಪತ್ರ ಮತ್ತು ಉದ್ಯೋಗದ ಆಮಿಷ ತೋರಿಸಿ ಹಣ ವಸೂಲಿ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ.

ಹಾಸನ,ಜೂನ್ 3,(www.kannadapost.com): ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಯಾವುದೇ ಹೊಸ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಅಥವಾ ಆದೇಶ ಹೊರಡಿಸಿಲ್ಲ. ಆದಾಗ್ಯೂ ಕೆಲ ಕಿಡಿಗೇಡಿಗಳು ಉದ್ಯೋಗ ನೀಡುವ ಆಮಿಷವೊಡ್ಡಿ ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಉದ್ಯೋಗಾಕಾಂಕ್ಷಿಗಳು ಇಂತಹ ಮೋಸಗಾರರ ಬಲೆಗೆ ಬೀಳದಂತೆ ಎಚ್ಚರಿಕೆ ವಹಿಸಬೇಕೆಂದು ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ಮನವಿ ಮಾಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ವಿವಿಧ ದರ್ಜೆಯ 83 ಹುದ್ದೆಗಳ ನೇಮಕಾತಿಗೆ 2018ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು ಎಂದು ತಿಳಿಸಿದರು. ಕಿರಿಯ ಸಹಾಯಕ 54, ಐಟಿ ಸೂಪರ್‌ವೈಸರ್ 7 ಹಾಗೂ ಅಟೆಂಡರ್ 22 ಹುದ್ದೆಗಳಿಗೆ ಸಹಕಾರ ಇಲಾಖೆಯ ಅನುಮತಿ ಪಡೆದು 2018ರ ನವೆಂಬರ್ 5ರಂದು ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿತ್ತು ಎಂದು ವಿವರಿಸಿದರು.

ಅಧಿಸೂಚನೆ ಅನ್ವಯ ಐಟಿ ಸೂಪರ್‌ವೈಸರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ 516 ಅಭ್ಯರ್ಥಿಗಳಿಗೆ 2019ರ ಫೆಬ್ರುವರಿ 10ರಂದು, ಅಟೆಂಡರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ 2,651 ಅಭ್ಯರ್ಥಿಗಳಿಗೆ ಜೂನ್ 16ರಂದು ಹಾಗೂ ಕಿರಿಯ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದ 3,541 ಅಭ್ಯರ್ಥಿಗಳಿಗೆ ಜೂನ್ 30ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು ಎಂದು ಹೇಳಿದರು.

ಆದರೆ 2019ರ ಅಕ್ಟೋಬರ್ 25ರಂದು ಸಹಕಾರ ಇಲಾಖೆಯ ನಿಬಂಧಕರು ಸರ್ಕಾರದ ನಿರ್ದೇಶನದಂತೆ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಆದೇಶ ನೀಡಿದ್ದರು. ಈ ಆದೇಶ ಪ್ರಶ್ನಿಸಿ ಬ್ಯಾಂಕಿನ ಆಡಳಿತ ಮಂಡಳಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಅದರ ಬಳಿಕ 2018ರ ಅಧಿಸೂಚನೆಗೆ ಸಂಬಂಧಿಸಿದಂತೆ ಯಾವುದೇ ಮುಂದಿನ ಕ್ರಮ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮೂಲಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಕೆಲ ಸಮಾಜಘಾತುಕ ವ್ಯಕ್ತಿಗಳು ಬ್ಯಾಂಕಿನ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಡುವುದಾಗಿ ಹೇಳಿ ಅಭ್ಯರ್ಥಿಗಳು ಹಾಗೂ ಅವರ ಕುಟುಂಬದವರನ್ನು ವಂಚಿಸುತ್ತಿದ್ದಾರೆ. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಸಹಿಯನ್ನು ನಕಲಿ ಸ್ಕ್ಯಾನ್ ಮಾಡಿ, ಬ್ಯಾಂಕಿನ ಲೆಟರ್‌ಹೆಡ್ ಅನ್ನು ದುರುಪಯೋಗಪಡಿಸಿಕೊಂಡು 2024ರ ದಿನಾಂಕ ನಮೂದಿಸಿದ ನಕಲಿ ಲಿಖಿತ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಅಭ್ಯರ್ಥಿಗಳಿಗೆ ಕಳುಹಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ನಾಗರಾಜ್ ತಿಳಿಸಿದರು.

2018ರ ಅಧಿಸೂಚನೆಯನ್ನು ಹೊರತುಪಡಿಸಿ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಹೊಸ ಅಧಿಸೂಚನೆ ಹೊರಡಿಸಿಲ್ಲ ಹಾಗೂ ಯಾವುದೇ ಲಿಖಿತ ಪರೀಕ್ಷೆ ನಡೆಸಿಲ್ಲ ಎಂದು ಅವರು ಪುನರುಚ್ಚರಿಸಿದರು.

ನೇಮಕಾತಿ ಪ್ರಕ್ರಿಯೆ ಪುನರಾರಂಭವಾದಲ್ಲಿ ಸರ್ಕಾರದ ನಿಯಮಾವಳಿಗಳ ಅನುಸಾರ ಪಾರದರ್ಶಕವಾಗಿ ನಡೆಸಲಾಗುವುದು. ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಹಾಗೂ ದಿನಪತ್ರಿಕೆಗಳ ಮೂಲಕ ಮಾತ್ರ ಮಾಹಿತಿ ಪ್ರಕಟಿಸಲಾಗುವುದು ಎಂದು ಹೇಳಿದರು.

ಸಾರ್ವಜನಿಕರು ಹಾಗೂ ಉದ್ಯೋಗಾಕಾಂಕ್ಷಿಗಳು ಯಾವುದೇ ಆಮಿಷಗಳಿಗೆ ಒಳಗಾಗದೇ ನೇರವಾಗಿ ಬ್ಯಾಂಕಿನ ಪ್ರಧಾನ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹೊನವಳ್ಳಿ ಸತೀಶ್, ಗಿರೀಶ್ ಚನ್ನವೀರಪ್ಪ, ಕಣದಳ್ಳಿ ಮಂಜೇಗೌಡ, ಜಯರಾಂ ಮತ್ತಿತರರು ಉಪಸ್ಥಿತರಿದ್ದರು.

error: Content is protected !!