ಮೈಸೂರು : ಸುತ್ತೂರು ಜಾತ್ರೆಯಲ್ಲಿ ಮಲಗಿದ್ದ ಭಕ್ತರ ಮೇಲೆ ಹರಿದ ಕಾರು: ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಚಿಂತಾಜನಕ

ಮೈಸೂರು : ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಜಾತ್ರೆಯಲ್ಲಿ ಅವಘಡವೊಂದು ಸಂಭವಿಸಿದ್ದು  ಮಲಗಿದ್ದ ಭಕ್ತರ ಮೇಲೆ ಅಪರಿಚಿತ ಕಾರು ಹರಿದು ಓರ್ವ ಸಾವನಪ್ಪಿ ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿರುವ ಘಟನೆ ನಡೆದಿದೆ.

ಸುತ್ತೂರು ಸಮೀಪದ ಗಟ್ಟವಾಡಿ ಗ್ರಾಮದ ಜಿಎಂ ಪ್ರದೀಪ್ ಕುಮಾರ್ 36 ವರ್ಷದ ಮೃತ ವ್ಯಕ್ತಿ, ಗಟ್ಟವಾಡಿ ಗ್ರಾಮದ ರವಿ ಗಂಭೀರ ಗಾಯಗೊಂಡಿದ್ದು, ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಬ್ಬರು ಭಕ್ತರು ಸುತ್ತೂರು ದೇವಾಲಯದ ಬಳಿ  ಪೌರಾಣಿಕ ನಾಟಕವನ್ನು ವೀಕ್ಷಣೆ ಮಾಡಿ ಗದ್ದಿಗೆ ಬಳಿ ಮಲಗಿದ್ದರು. ನಾಟಕ ವೀಕ್ಷಿಸಿ ಗಾಢ ನಿದ್ರೆಯಲ್ಲಿದ್ದ ಇಬ್ಬರ ಭಕ್ತರ ತಲೆಯ ಭಾಗದ ಮೇಲೆ ಅಪರಿಚಿತ ಕಾರು ಹರಿದು ಈ ದುರ್ಘಟನೆ ಸಂಭವಿಸಿದೆ.

ನಂಜನಗೂಡಿನ ಸರ್ಕಾರಿ ಆಸ್ಪತ್ರೆ ಶವಗಾರದಲ್ಲಿ ಮೃತ ಪ್ರದೀಪ್ ಮರಣೋತ್ತರ ಪರೀಕ್ಷೆ ನಡೆದಿದ್ದು, ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಇಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ. ನೊಂದ ಕುಟುಂಬಸ್ಥರು ಮತ್ತು ಗಟ್ಟವಾಡಿ ಗ್ರಾಮಸ್ಥರು ಬಿಳಿಗೆರೆ ಪೊಲೀಸ್ ಠಾಣೆಯ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಎ 03 ಸಿ 3498 ನಂಬರಿನ ಅಪರಿಚಿತ ಕಾರು ಅಪಘಾತವೆಸಗಿದ್ದು ಕಾರು ಹಾಗೂ ಚಾಲಕನ ಪತ್ತೆಗೆ ಬಿಳಿಗೆರೆ ಠಾಣಾ ಪೊಲೀಸರು ಮುಂದಾಗಿದ್ದಾರೆ.