ಅರಕಲಗೂಡು: ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ನಾಲ್ಕು ತಿಂಗಳ ಗರ್ಭಿಣಿ ವಂದನಾ (24) ಎಂಬ ವಿವಾಹಿತೆಯ ಶವ ಕೆರೆಯಲ್ಲಿ ಪತ್ತೆಯಾಗಿದೆ. ಪತಿಯ ಮನೆಯವರು ಕಿರುಕು ನೀಡಿ ಆತ್ಮಹತ್ಯೆಗೆ ದೂಡಿದ್ದಾರೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಹೊನ್ನವಳ್ಳಿ ಕೆರೆಯಲ್ಲಿ ಪತ್ತೆಯಾದ ದೇಹ:
ಮಂಗಳವಾರ ಸಂಜೆ ವಂದನಾಳ ಶವ ಹೊನ್ನವಳ್ಳಿ ಗ್ರಾಮದ ಕೆರೆಯಲ್ಲಿ ತೇಲಿಬರುತ್ತಿರುವುದನ್ನು ಗ್ರಾಮಸ್ಥರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ದೇಹವನ್ನು ಕೆರೆಯಿಂದ ಹೊರತೆಗೆದು, ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಮೃತಳ ಕುಟುಂಬದ ಆರೋಪ:
ಒಂದೂವರೆ ವರ್ಷಗಳ ಹಿಂದೆ ಪ್ರೀತಿಸಿ ವಂದನಾ–ರೂಪಿತ್ ಮದುವೆಯಾಗಿದ್ದರು. ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ವಂದನಾ, ಮದ್ಯ ವ್ಯಸನಿ ಪತಿ ರೂಪಿತ್ ಹಾಗೂ ಅವರ ಪೋಷಕರಾದ ಮಂಜುಳಾ ಮತ್ತು ರೇವಣ್ಣರಿಂದ ನಿರಂತರ ಹಣದ ಒತ್ತಡ ಹಾಗೂ ಕಿರುಕುಳ ಎದುರಿಸುತ್ತಿದ್ದರು ಎಂದು ವಂದನಾಳ ಪೋಷಕರು ಆರೋಪಿಸಿದ್ದಾರೆ.
ಜಗಳದ ನಂತರ ಕಾಣೆಯಾಗಿದ್ದ ವಂದನಾ:
ಮಂಗಳವಾರ ಅತ್ತೆ ಮಂಜುಳಾ ಮತ್ತು ಸೊಸೆ ವಂದನಾ ನಡುವೆ ಜಗಳ ನಡೆದಿತ್ತು. ಅದರ ನಂತರದಿಂದ ವಂದನಾ ಕಾಣೆಯಾಗಿದ್ದು, ನಿನ್ನೆ ಸಾಯಂಕಾಲ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪ್ರೀತಿ, ಪ್ರೇಮ ವಿವಾಹಗಳಿಗೆ ಬಲಿಯಾದ ಎರಡು ಜೀವಗಳ ನೋವುಂಡ ಕುಟುಂಬ:
ಕೆಲ ವರ್ಷಗಳ ಹಿಂದೆ ವಂದನಾಳ ತಂಗಿ ಮೇಘನಾ (19) ಯುವಕನೊಬ್ಬನನ್ನು ಪ್ರೀತಿಸಿದ್ದರು. ಸಂಬಂಧದಲ್ಲಿ ತಲೆದೋರಿದ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ನಂತರ ವಂದನಾ ಪ್ರೀತಿಸಿ ಮದುವೆಯಾಗಿದ್ದರು. ಮಗಳ ವೈವಾಹಿಕ ಜೀವನದಿಂದ ಅಸಮಾಧಾನಗೊಂಡಿದ್ದ ತಂದೆ ಮಂಜುನಾಥ್ ಮತ್ತು ಸಹೋದರ ದೀಪಕ್ ಅವರು ವಂದನಾಳನ್ನು ಭೇಟಿ ಮಾಡಿರಲಿಲ್ಲ. ತಾಯಿಯೊಂದಿಗೆ ಮಾತ್ರ ಸಂಪರ್ಕದಲ್ಲಿದ್ದ ವಂದನಾ ಘಟನೆಗೆ ಮುಂಚಿನ ದಿನಗಳಲ್ಲೂ ಮನೆಯಲ್ಲಿ ತೀವ್ರ ಸಂಘರ್ಷ ಎದುರಿಸುತ್ತಿದ್ದರು ಎಂದು ಕುಟುಂಬ ಮೂಲಗಳು ಹೇಳಿವೆ.
ಪೊಲೀಸ್ ತನಿಖೆ ಆರಂಭ:
ಘಟನೆ ಕುರಿತು ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಹಾಗೂ ಅತ್ತೆ–ಮಾಮನ ವಿಚಾರಣೆ ಪ್ರಕ್ರಿಯೆ ಮುಂದುವರೆದಿದೆ. ಮರಣದ ನಿಖರ ಕಾರಣ ಮರಣೋತ್ತರ ವರದಿ ಬಂದ ನಂತರ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.










