ಹಾಸನ: ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಹೊರಟಿರುವ ನಗರದ ರಾಜಘಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳಿಸುವಂತೆ ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಚಾಲಕಿ ಚೈತ್ರ, ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಗ್ರಾಮ ಪಂಚಾಯಿತಿಗೊಂದು ಸರ್ಕಾರಿ ಶಾಲೆ ಮಾಡುತ್ತೇವೆ ಎಂದು ಹೇಳಿ 40 ಸಾವಿರಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚಲು ಹೊರಟಿದೆ.
ಹಾಸನದಲ್ಲೂ ಕೂಡ 1942 ಸರ್ಕಾರಿ ಶಾಲೆಗಳು ಈ ಯೋಜನೆಯಡಿಯಲ್ಲಿ ಮುಚ್ಚಿ ಹೋಗುತ್ತವೆ. ಅದರಲ್ಲಿ ಈ ರಾಜಘಟ್ಟ ಶಾಲೆ ಕೂಡ.
ಈ ಶಾಲೆಯಲ್ಲಿ ನೂರಾರು ಮಕ್ಕಳು ಶಿಕ್ಷಣ ಪಡೆದುಕೊಂಡಿದ್ದಾರೆ, 2-3 ವರ್ಷಗಳ ಹಿಂದೆ 20 ಇದ್ದ ಮಕ್ಕಳ ಸಂಖ್ಯೆ ಈಗ 41 ತಲುಪಿದೆ.
ಅಷ್ಟು ಮಕ್ಕಳು ಇಲ್ಲಿ ಶಿಕ್ಷಣ ಪಡೆದು ಕೊಳ್ಳುತ್ತಿದ್ದಾರೆ. ಊರಿನ ಗ್ರಾಮಸ್ಥರು ಹಾಗೂ ನೆರೆಯವರು ಸೇರಿ ಶಾಲೆಗೆ ಬಹಳಷ್ಟು ಸಹಾಯ ನೀಡಿ ಅದನ್ನು ಒಂದು ಮಟ್ಟಿಗೆ ಅಭಿವೃದ್ಧಿಪಡಿಸಿದ್ದಾರೆ. ಅಲ್ಲಿ ಶಿಕ್ಷಣ ಪಡೆಯುತ್ತಿರುವವರೆಲ್ಲರೂ ಕೂಡ ಬಡ ರೈತರ ಕೂಲಿ ಕಾರ್ಮಿಕರ, ವಲಸೆ ಕಾರ್ಮಿಕರ ಮಕ್ಕಳು, ಆ ಊರಿನಲ್ಲಿರುವ ಸರ್ಕಾರಿ ಶಾಲೆಯೇ ಅವರೆಲ್ಲರಿಗೂ ಪ್ರಾಥಮಿಕ ಶಿಕ್ಷಣದ ಆಸರೆ, ಆದರೆ ಅದೇ ಶಾಲೆ ಇಂದು ಕೆಪಿಎಸ್- ಮ್ಯಾಗ್ನೆಟ್ ಹೆಸರಿನಲ್ಲಿ 5 ಕಿ.ಮೀ ಗಿಂತಲೂ ದೂರ ಇರುವ ಬೂವನಹಳ್ಳಿ ಶಾಲೆಗೆ ವಿಲೀನವಾಗುವ ಕಾರಣ, ಎಷ್ಟೋ ಪೋಷಕರು ತಮ್ಮ ಮಕ್ಕಳನ್ನು ದೂರದೂರಿಗೆ ಕಳುಹಿಸಲು ಆತಂಕದಲ್ಲಿದ್ದಾರೆ ಎಂದು ಹೇಳಿದರು.
ಶಿಕ್ಷಣ ಸಾರ್ವತ್ರಿಕವಾಗಿರಬೇಕು ಮತ್ತು ಎಷ್ಟೇ ಸಂಖ್ಯೆಯಿದ್ದರೂ, ಸದು ಎಲ್ಲರನ್ನೂ ತಲುಪುವಂತೆ ಇರಬೇಕು ಎಂದು ಮಹಾತ್ಮ ಜ್ಯೋತಿಬಾ ಫುಲೆ ಅವರು ಬಲವಾಗಿ ಪ್ರತಿಪಾದಿಸಿದ್ದರು.
ಅಜ್ಞಾನದ ಅಂಧಕಾರ ಹೊಡೆ ದೋಡಿಸಲು ಮಹಿಳೆ ಮತ್ತು ದಲಿತರಿಗೆ ಜ್ಞಾನದ ಬೆಳಕನ್ನು ನೀಡಲು ಅವರು ಶಾಲೆಗಳನ್ನು ಆರಂಭಿಸಿದರು.
ಕೇವಲ ಶಿಕ್ಷಣದಿಂದ ಮಾತ್ರವೇ ಮನುಷ್ಯರು ವಿಮರ್ಶಾತ್ಮಕ
ಧೋರಣೆ ಮತ್ತು ಆತ್ಮ ಸಮ್ಮಾನ ಹೊಂದಲು ಸಾಧ್ಯ ಎಂಬುದನ್ನು ಜ್ಯೋತಿಬಾ ನಂಬಿದ್ದರು. ಆದರೆ ಇಂದಿನ ಸರ್ಕಾರಗಳು ನಮ್ಮ ಎಲ್ಲಾ ಮಹನೀಯರ ಆಸೆಗಳನ್ನು ಗಾಳಿಗೆ ತೂರಿ ಇಂದು ವಿವಿಧ ಹೆಸರುಗಳ ಅಡಿಯಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿವೆ. ಇದಂತಹ ವಿಪರ್ಯಾಸ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಚಂದ್ರಕಲಾ, ಜಿಲ್ಲಾ ಸಹ ಸಂಚಾಲಕರಾದ ಸುಷ್ಮಾ, ಕಾರ್ಯಕರ್ತರಾದ ರಂಗನಾಥ್, ತರುಣ್ ಹಾಗೂ ರಾಜಘಟ್ಟದ ಗ್ರಾಮಸ್ಥರಾದ ಧರ್ಮಪಾಲ, ಪುರು ಷೋತ್ತಮ್, ರಮೇಶ್, ಗಂಗಾಧರ್, ಕಮಲಮ್ಮ, ಗಿರೀಶ, ಆ ಶಾಲೆಯ ವಿದ್ಯಾರ್ಥಿಗಳು ಹಾಗೂ ಮುಂತಾದವರು ಭಾಗವಹಿಸಿದ್ದರು.










