ಹಾಸನ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರು ಸ್ಫೋಟ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ನಗರದ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಪೊಲೀಸರಿಂದ ತಪಾಸಣೆ ನಡೆಸಲಾಗುತ್ತಿದ್ದು, ಕಾರ್, ಬೈಕ್, ಪಾರ್ಕಿಂಗ್ ಏರಿಯಾವನ್ನು ಇಂಚಿಂಚೂ ಪರಿಶೀಲನೆ ಮಾಡಲಾಗುತ್ತಿದೆ. ಮೆಟಲ್ ಡಿಟೆಕ್ಟರ್ ಹಿಡಿದು ಎಲ್ಲೆಡೆ ಪರಿಶೀಲನೆ ನಡೆಸಲಾಗುತ್ತಿದೆ.
ರೈಲ್ವೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಬ್ಯಾಗ್ ಹಾಗೂ ನಿಲ್ದಾಣ ವ್ಯಾಪ್ತಿಯಲ್ಲಿ ಇರುವ ಕಸದ ತೊಟ್ಟಿಗಳನ್ನು ಶೋಧ ಪೊಲೀಸರು ಶೋಧ ನಡೆಸಿದರು.
ರೈಲ್ವೆ ಇನ್ಸ್ಪೆಕ್ಟರ್ ಪಾಟೀಲ್ ನೇತೃತ್ವದಲ್ಲಿ ತಪಾಸಣೆ ನಡೆಯಿತು. ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಜನ ನಿಬಿಡ ಪ್ರದೇಶದಲ್ಲಿ ಹೈ ಅಲರ್ಟ್ ಮಾಡಲಾಗಿದೆ.
ಹಾಗೆಯೇ ಬೇಲೂರಿನ ಐತಿಹಾಸಿಕ ಚೆನ್ನಕೇಶವ ದೇವಾಲಯಕ್ಕೂ ಸೂಕ್ತ ಭದ್ರತೆ ವಹಿಸಲಾಗಿದೆ.
ಆದರೆ ಇಲ್ಲಿರುವ ಮೆಟಲ್ ಡಿಟೆಕ್ಟರ್ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಹಾಗೆಯೇ ಪ್ರಮುಖ ದ್ವಾರದಲ್ಲಿರುವ ಸಿಸಿಟಿವಿ ಸಹ ಕಾರ್ಯ ನಿರ್ವಹಿಸುತ್ತಿಲ್ಲ. ಪ್ರತಿನಿತ್ಯ ದೇವಾಲಯಕ್ಕೆ ನೂರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಇವರಲ್ಲಿ ಯಾರು, ಹೇಗೆ ಎಂಬುದು ತಿಳಿದಿಲ್ಲ. ಆದರೂ ಅಂತಹವರ ಮೇಲೆ ನಿಗಾ ಇಡಬೇಕಾದ ಮೆಟಲ್ ಡಿಟೆಕ್ಟರ್ ಯಂತ್ರವೇ ಒಂದೂವರೆ ತಿಂಗಳಿಂದ ಕೆಟ್ಟು ನಿಂತಿರುವುದು ವ್ಯವಸ್ಥೆಯ ಲೋಪಕ್ಕೆ ಕನ್ನಡಿ ಹಿಡಿದಂತಿದೆ. ಚನ್ನಕೇಶವ ದೇವಾಲಯ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ್ದರೂ ಸೂಕ್ತ ಭದ್ರತೆ ಇಲ್ಲದೇ ಇರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಾಲಯದಲ್ಲಿ ಒಟ್ಟು ಮೂರು ಸಿಸಿ ಟಿವಿ ಅಳವಡಿಸಲಾಗಿದೆ. ಆದರೆ ಮುಖ್ಯ ದ್ವಾರದ ಬಳಿಯ ಸಿಸಿ ಟಿವಿಯೇ ಕೆಲಸ ಮಾಡುತ್ತಿಲ್ಲ. ಭದ್ರತೆ ವಿಚಾರದಲ್ಲಿ ಚನ್ನಕೇಶವಸ್ವಾಮಿ ದೇವಾಲಯ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಇದೇ ವೇಳೆ ದೆಹಲಿ ಸ್ಫೋಟ ಪ್ರಕರಣ ಕುರಿತು ಚನ್ನರಾಯಪಟ್ಟಣದಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಘಟನೆ ದುರದೃಷ್ಟಕರ.
ಮೃತ ಕುಟುಂಬಗಳಿಗೆ ಶೋಕ್ತ ಪಡಿಸುತ್ತೇನೆ ಎಂದರು. ತನಿಖೆಯಿಂದ ಕಾರಣ ಏನು ಎಂಬುದು ಗೊತ್ತಾಗಬೇಕು ಮತ್ತು ನ್ಯಾಯ ಸಮ್ಮತ ಪರಿಹಾರ ಆಗಬೇಕು.
ಈ ದಿಕ್ಕಿನಲ್ಲಿ ತನಿಖೆ ನಡೆಯುತ್ತಿದೆ. ಆದಷ್ಟು ಬೇಗ ಸತ್ಯ ಹೊರಬರಲಿ ಎಂದರು.
ಹೆಚ್ಚು ವಿಚಾರಗಳು ನನಗೆ ತಿಳಿದಿಲ್ಲ. ನಾನು ನೆನ್ನೆಯಿಂದ ಪ್ರವಾಸ ಮಾಡುತ್ತಿದ್ದೇನೆ. ನಾನು ನ್ಯೂಸ್ ಪೇಪರ್ ಟಿವಿ ನೋಡೇ ಇಲ್ಲ. ಇಂತಹ ಪ್ರಕರಣ ಆಗಬಾರದಿತ್ತು, ಆಗುವುದರಲ್ಲಿ ಎಚ್ಚರ ತಪ್ಪಿದೆಯೇ, ಘಟನೆ ತಡೆಯಲು ಸಾಧ್ಯ ಇತ್ತೆ, ಇವೆಲ್ಲವೂ ಆದಷ್ಟು ಬೇಗ ತನಿಖೆ ಆಗಬೇಕು. ಜೊತೆಗೆ ನ್ಯಾಯವೂ ಸಿಗಬೇಕು ಇದನ್ನ ಕೇಂದ್ರ ಸರ್ಕಾರ ಮಾಡಲಿ ಎಂದರು.










