ಹಾಸನ: ಮಾನವೀಯತೆ ಮತ್ತು ಪ್ರೀತಿ ತುಂಬಿದ ಅಪರೂಪದ ಘಟನೆ ನಗರದ ತವರು ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ನಲ್ಲಿ ನಡೆದಿದೆ. ವಿಶೇಷ ವೈದ್ಯಕೀಯ ಅವಶ್ಯಕತೆ ಹೊಂದಿದ್ದ ಪುಟ್ಟ ಹೆಣ್ಣು ಮಗುವೊಂದು, ದೂರದ ಅಮೆರಿಕದ ಮಿಸ್ಸೋರಿ ರಾಜ್ಯದ ವಿಲಿಯಮ್ ಮತ್ತು ಆಶ್ಲೀ ದಂಪತಿಗಳ ಜೀವನದಲ್ಲಿ ಹೊಸ ಬೆಳಕಾಗಿದ್ದಾಳೆ.
ಟ್ರಸ್ಟ್ ಆವರಣದಲ್ಲಿ ನಡೆದ ಈ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ಆ ಮಗು ತನ್ನ ಎರಡನೇ ವರ್ಷದ ಹುಟ್ಟುಹಬ್ಬವನ್ನು ಹೊಸ ಪೋಷಕರೊಂದಿಗೆ ಆಚರಿಸಿತು. ನಗು, ಕಣ್ಣೀರು ಮತ್ತು ಸಂತೋಷದ ಮಿಶ್ರಣವಾಗಿದ್ದ ಈ ಕ್ಷಣ ಎಲ್ಲರ ಮನವನ್ನೂ ಸ್ಪರ್ಶಿಸಿತು. ಕಳೆದ ಎರಡು ವರ್ಷಗಳಿಂದ ಟ್ರಸ್ಟ್ನ ಆಶ್ರಯದಲ್ಲಿ ಬೆಳೆದ ಈ ಮಗು, ಜನ್ಮದಿಂದಲೇ ಕೆಲವು ವೈದ್ಯಕೀಯ ಸವಾಲುಗಳನ್ನು ಎದುರಿಸುತ್ತಿದ್ದಳು.
ಆಕೆಯ ಆರೈಕೆ, ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಗೆ ಟ್ರಸ್ಟ್ ತವರು ಸಂಸ್ಥೆಯವರು ಶ್ರಮಿಸಿದ್ದಾರೆ. ಅಮೆರಿಕದ ದಂಪತಿಯಾದ ವಿಲಿಯಮ್ ಮತ್ತು ಆಶ್ಲೀ ಅವರು ಆಕೆಯ ಬಗ್ಗೆ ತಿಳಿದುಕೊಂಡ ಬಳಿಕ, ಕಾನೂನಿನ ಪ್ರಕಾರ ಎಲ್ಲಾ ದತ್ತು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಭಾರತದ ಸಂಬಂಧಿತ ಇಲಾಖೆಗಳ ಅನುಮೋದನೆ ಪಡೆದು ಆಕೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ದತ್ತು ಪ್ರಕ್ರಿಯೆ ಪೂರ್ಣಗೊಂಡ ನಂತರ, ಮಗಳ ಹುಟ್ಟುಹಬ್ಬವನ್ನು ಹಾಸನದ ಟ್ರಸ್ಟ್ ಆವರಣದಲ್ಲೇ ಹೃದಯಸ್ಪರ್ಶಿಯಾಗಿ ಆಚರಿಸಲಾಯಿತು. ಕೇಕ್ ಕತ್ತರಿಸಿದ ಪುಟ್ಟ ಮಗಳು ನಗುಮೊಗದಿಂದ ಎಲ್ಲರಿಗೂ ಸಂತೋಷ ಹಂಚಿದಳು. ವಿಲಿಯಮ್ ಮತ್ತು ಆಶ್ಲೀ ದಂಪತಿಗಳು `ಈ ಮಗಳು ನಮ್ಮ ಜೀವನದ ಅತಿ ಅಮೂಲ್ಯ ವರ’ ಎಂದು ಭಾವುಕರಾದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಡಾ. ಪಾಲಾಕ್ಷ, ಟ್ರಸ್ಟಿ ಮಧುಪ್ರಿಯ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಶ್ರೀ ರಂಗ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಶ್ರೀಯುತ ರವಿ, ಶ್ರೀಯುತ ರಂಗಸ್ವಾಮಿ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಎಲ್ಲರೂ ಈ ಹೃದಯಸ್ಪರ್ಶಿ ಕ್ಷಣದ ಸಾಕ್ಷಿಗಳಾಗಿ ಹೊಸ ಕುಟುಂಬಕ್ಕೆ ಹಾರೈಕೆ ಸಲ್ಲಿಸಿದರು. ಡಾ. ಪಾಲಾಕ್ಷ ಅವರು “ತವರು ಟ್ರಸ್ಟ್ನ ಉದ್ದೇಶ ಯಾವುದೇ ಮಗುವೂ ಪ್ರೀತಿ ಮತ್ತು ಆರೈಕೆಯಿಲ್ಲದೆ ಇರಬಾರದು. ಇಂದು ಈ ಪುಟ್ಟಮಗಳು ಹೊಸ ಜೀವನದ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದಾಳೆ. ಇದು ನಮ್ಮೆಲ್ಲರಿಗೊಂದು ಹೆಮ್ಮೆಯ ಕ್ಷಣ” ಎಂದು ಹೇಳಿದರು.
ಸಂಸ್ಥೆಯ ಸಿಬ್ಬಂದಿ ಮತ್ತು ಅತಿಥಿಗಳು ಆ ಪುಟ್ಟಮಗಳಿಗೂ ಹೊಸ ಪೋಷಕರಿಗೂ ಆಶೀರ್ವಾದ ಕೋರಿ ಶುಭಹಾರೈಸಿದರು. ಈ ದೃಶ್ಯ, ಮಾನವೀಯತೆಯ ನಿಜವಾದ ಅರ್ಥವನ್ನು ತೋರಿಸಿತು. ಪ್ರೀತಿ, ತಾಯ್ತನ ಮತ್ತು ಕರುಣೆ ಮೀರಿದ ಅಂತರರಾಷ್ಟ್ರೀಯ ಬಂಧದ ಪ್ರತೀಕವಾಗಿ ಉಳಿದಿತು.










