ಹಾಸನ: ಬಿಜೆಪಿಯಲ್ಲಿ ಬಣ ರಾಜಕೀಯ ವಿಚಾರವಾಗಿ ಒಂದು ಮನೆ ಎಂದ ಮೇಲೆ ಬೇರೆ ಬೇರೆ ಇರುತ್ತೆ, ಐದೂ ಬೆರಳು ಒಂದೇ ರೀತಿ ಇರಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಅದೆಲ್ಲ ಸರಿ ಹೋಗುತ್ತೆ ಅನ್ನುವ ಭರವಸೆ ಇದೆ ಎಂದು ಬಿಜೆಪಿ ಶಾಸಕ ಹಾಗೂ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ಹೇಳಿದರು.
ಇಂದು ಹಾಸನಾಂಬೆ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಸಮೀಕ್ಷೆಯಲ್ಲಿ ಲಿಂಗಾಯತ-ವೀರಶೈವ ಎಂದು ಬರೆಸಿ ಎಂಬ ಮಠಾಧೀಶರ ಹೇಳಿಕೆಗೆ ದೇಶದಲ್ಲಿ ಇರುವವರೆಲ್ಲಾ ಹಿಂದೂಗಳೇ, ಬಸವಣ್ಣ ಎಲ್ಲಿಯೂ ಸಹಿತ ಸನಾತನ ಧರ್ಮ ಫಾಲೋ ಮಾಡಬೇಡಿ ಅಂಥ ಹೇಳಿಲ್ಲ, ಬಸವಣ್ಣ ಕೂಡಲ ಸಂಗಮ ಹೆಸರು ತಗೊಂಡು ಎಲ್ಲಾ ವಚನ ಬರೆದರು.
ಅಕ್ಕಮಹಾದೇವಿ ಚನ್ನಮಲ್ಲಿಕಾರ್ಜುನ ಹೆಸರು ತಗೊಂಡು ವಚನ ಬರೆದರು, ಎಲ್ಲಾ ಶರಣರು ದೇವರ ಹೆಸರು ತೆಗೆದುಕೊಂಡು ವಚನ ಬರೆದಿದ್ದಾರೆ. ಲೆಫ್ಟಿಸ್ಟ್ ಥಿಂಕಿಂಗ್, ಲೆಫ್ಟಿಸ್ಟ್ ಜನ ಬಸವಣ್ಣ ಅವರನ್ನು ನಕ್ಸಲ್ ಹೀರೋ ಮಾಡಲು ಹೊರಟಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ಸರ್ಕಾರ ಸ್ಪಂದಿಸಿಲ್ಲ: ರಾಜ್ಯದ ಹಲವೆಡೆ ಭಾರೀ ಮಳೆಯಿಂದ ಹಾನಿಯಾಗಿರುವ ಬಗ್ಗೆ ಮಾತನಾಡಿ, ನಮ್ಮ ಪಕ್ಷದ ವತಿಯಿಂದ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇವೆ. ಅತಿವೃಷ್ಟಿಗೆ ಸರ್ಕಾರ ಯಾವುದೇ ರೀತಿಯ ಸ್ಪಂದನೆ ಮಾಡಿಲ್ಲ. ಭತ್ತ, ಹೆಸರು, ತೊಗರಿ, ಅಡಕೆ ಬೆಳೆಗಳು ಹಾಳಾಗಿವೆ. ಸಾಮಾನ್ಯ ಜನರಿಗೆ ತೊಂದರೆ ಆಗಿದೆ, ರೈತರ ಬೆಳೆ, ರಸ್ತೆಗಳು ಹಾಳಾಗಿವೆ. ಆದರೂ ರಾಜ್ಯ ಸರ್ಕಾರ ಒಂದು ಪೈಸೆ ಸ್ಪಂದನೆ ಮಾಡಿಲ್ಲ ಎಂದು ದೂರಿದರು.
ಮುಖ್ಯಮಂತ್ರಿಗಳು ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಬೇಕಿತ್ತು, ಅವರು ಪ್ರವಾಸ ಮಾಡ್ತಿಲ್ಲ, ಜಿಲ್ಲಾ ಮಂತ್ರಿಗಳು ಕೂಡ ಪ್ರವಾಸ ಮಾಡ್ತಿಲ್ಲ, ಸರ್ಕಾರಕ್ಕೆ ರೈತರ ಬಗ್ಗೆ, ಜನರ ಬಗ್ಗೆ ಸಂಪೂರ್ಣ ತಾತ್ಸಾರ ಮಾಡಿದೆ. ಸರ್ಕಾರದ ದುಡ್ಡು ತಿಂದು ತೇಗಿ ಭ್ರಷ್ಟಾಚಾರ ಮಾಡಿದ್ದಾರೆ, ಆಡಳಿತದ ಕುರ್ಚಿ ಸಂಬಂಧ ಹೊಡೆದಾಡುತ್ತಿದ್ದಾರೆ. ಎರಡೂವರೆ ವರ್ಷ ಆಯ್ತು ಹತ್ತು ಕೋಟಿ ಬಿಟ್ಟು ಬೇರೆ ಅನುದಾನ ಕೊಟ್ಟಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಈಗೇನೋ 25 ಕೋಟಿ ಕೊಡ್ತಿದ್ದಾರೆ, ಅದು ಟೆಂಡರ್ ಆಗಿ ಕೆಲಸ ಮಾಡುವುದರೊಳಗೆ ಎಲೆಕ್ಷನ್ ಬರುತ್ತೆ, ಅನುದಾನ ಎನ್ನುವುದು ಇಲ್ಲವೇ ಇಲ್ಲ, ಸರ್ಕಾರ ಇದೆ ಎನ್ನುವ ಕುರುಹು ನಮಗೆ ಕಾಣುತ್ತಿಲ್ಲ, ಅಧಿವೇಶನದಲ್ಲಿ ಸರ್ಕಾರದ ಲೋಪದೋಷ ಎತ್ತಿ ತೋರಿಸಿದ್ದೇವೆ ಎಂದರು.
ಅತಿವೃಷ್ಟಿ ಆಗಿರುವ ಎಲ್ಲಾ ಕಡೆ ಪ್ರವಾಸ ಮಾಡಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದೇವೆ. ಅದು ಗೊತ್ತಾಗುತ್ತಿದ್ದಂತೆಯೇ ಇತ್ತೀಚೆಗೆ ನೋಡಿ ಬಂದಿದ್ದಾರೆ. ಆದರೂ ನಾವು ವಿರೋಧ ಪಕ್ಷವಾಗಿ ಏನು ಕೆಲಸ ಮಾಡಬೇಕು ಮಾಡ್ತೀವಿ ಎಂದರು.
ಹಾಸನಾಂಬೆ ಜಾತ್ರೆಯಲ್ಲಿ ಈ ಬಾರಿ ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದೆ. ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಒಳ್ಳೆಯ ಆರೆಂಜ್ಮೆಂಟ್ ಮಾಡಿದ್ದಾರೆ. ಎಲ್ಲರೂ ಸಮಾಧಾನದಿಂದ ದರ್ಶನ ಮಾಡುತ್ತಿದ್ದಾರೆ. ಇದಕ್ಕಾಗಿ ಕೃಷ್ಣ ಬೈರೇಗೌಡ ಹಾಗೂ ಅಧಿಕಾರಿಗಳ ತಂಡಕ್ಕೆ ಹೃದಯಪೂರ್ವಕ ಧನ್ಯವಾದ ಹೇಳಿದರು. ಕಳೆದ ಬಾರಿ ವಿವಿಐಪಿ ಪಾಸ್ಗಳಿಂದ ದೊಡ್ಡ ಪ್ರಮಾಣದಲ್ಲಿ ತೊಂದರೆ ಆಗಿತ್ತು, ಈ ಸಲ ಸಾರ್ವಜನಿಕರಿಗೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಿದ್ದಾರೆ, ವಿವಿಐಪಿ ಗಳಿಂದ ಸಾಮಾನ್ಯ ಜನಕ್ಕೆ ತೊಂದರೆ ಆಗದಂತೆ ಈ ರೀತಿಯ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.
2018ರಲ್ಲಿ ಇದೇ ಕೆಲಸ ಮಾಡಿದ್ರು, ಆಗ ಜನ ಅವರಿಗೆ ಬುದ್ಧಿ ಕಲಿಸಿದ್ರು, ಈಗಲೂ ಜನ ಅವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಎಚ್ಚರಿಸಿದರು.










