ಚನ್ನರಾಯಪಟ್ಟಣ: ಎಸ್.ಎಲ್.ಭೈರಪ್ಪ ಅವರಿಗೆ ಭಾರತ ರತ್ನ ಗೌರವ ಸಲ್ಲಬೇಕು

Kannada Sahitya Parishad Hirisave Hobli President H.A. Pramod said that the world's greatest writer D.S.L. Bhyrappa should be honored with the Bharat Ratna award.

ಚನ್ನರಾಯಪಟ್ಟಣ: ವಿಶ್ವಶ್ರೇಷ್ಠ ಸಾಹಿತಿ ದಿ.ಎಸ್.ಎಲ್.ಭೈರಪ್ಪ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಹಿರೀಸಾವೆ ಹೋಬಳಿ ಅಧ್ಯಕ್ಷ ಎಚ್.ಎ.ಪ್ರಮೋದ್ ಹೇಳಿದರು.
ತಾಲ್ಲೂಕಿನ ಹಿರೀಸಾವೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯ ಸರ್ಕಾರವು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದರು.

ಸರಸ್ವತಿ ಸಮ್ಮಾನ್ ಶ್ರೀ ಎಸ್.ಎಲ್.ಭೈರಪ್ಪ ಅವರು ಬರೆದಿರುವ ಕಾದಂಬರಿಗಳು ಕೇವಲ ಕಾಲ್ಪನಿಕವಲ್ಲ. ಸಮಾಜ ಹಾಗೂ ಜನಸಾಮಾನ್ಯರ ಬದುಕಿಗೆ ಹತ್ತಿರವಾಗಿದ್ದು ಯುವ ಸಮುದಾಯಕ್ಕೆ ದಾರಿದೀಪವಾಗಲಿವೆ. ಅವರ ಕಾದಂಬರಿಗಳು ಮಾರ್ಗಸೂಚಿಯಾಗಿವೆ ಎಂದು ತಿಳಿಸಿದರು.

ಹಿರಿಯ ಸಾಹಿತಿ ಡಾ.ಚಂದ್ರೇಗೌಡ ನಿಂಬೇಹಳ್ಳಿ ಮಾತನಾಡಿ, ಎಸ್.ಎಲ್.ಭೈರಪ್ಪ ಅವರು ದೈಹಿಕವಾಗಿ ಅಷ್ಟೇ ನಮ್ಮಿಂದ ಮರೆಯಾಗಬಹುದು ಆದರೆ ಅವರ ಕೃತಿ ಕಾದಂಬರಿಗಳು ಜನ-ಮನದಲ್ಲಿ ಸಾವಿರಾರು ವರ್ಷಗಳ ಕಾಲ ಚಿರವಾಗಿ ಉಳಿದು ಇತಿಹಾಸ ಪುಟಗಳಲ್ಲಿ ಸೇರಲಿರುವುದು ವಿಶೇಷ ಎಂದು ಭಾವುಕರಾದರು.

ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ವಿಶ್ವ ಮಟ್ಟದಲ್ಲಿ ಬೆಳೆದು ಹೆಸರು ಹಾಗೂ ಕೀರ್ತಿ ಪಡೆದ ಅವರು ದೈವ ಸಾಹಿತಿಯಾಗಿದ್ದಾರೆ. ಅವರು ಬರೆದ ಕೆಲ ಕಾದಂಬರಿಗಳು ಸಿನಿಮಾ ರೂಪ ಪಡೆದರೆ ಬಹುತೇಕ ಕಾದಂಬರಿಗಳು ಹಲವು ಬಾಷೆಗಳಲ್ಲಿ ಅನುವಾದಗೊಂಡಿವೆ. ಸಾಹಿತ್ಯ ಕ್ಷೇತ್ರದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯುವುದು ಸುಲಭ ಸಾಧ್ಯವಲ್ಲ ಎಂದರು.

ಎಸ್.ಎಲ್.ಭೈರಪ್ಪ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಗಣ್ಯರು ಪುಷ್ಪಾರ್ಪಣೆಗೊಳಿಸಿ ಒಂದು ನಿಮಿಷ ಕಾಲ ಮೌನಾಚರಣೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಕಾರ್ಯದರ್ಶಿಗಳಾದ ಮಾರುತಿ ಮಂಜು, ಹರೀಶ್, ಖಜಾಂಚಿ ತೋಟಿ ಮಂಜುನಾಥ್, ನಿಕಟಪೂರ್ವ ಅಧ್ಯಕ್ಷ ಡಾ.ಎಚ್.ಬಿ.ಶಂಕರ್, ನಿವೃತ್ತ ಪ್ರಾಂಶುಪಾಲ ತಮ್ಮಣ್ಣಗೌಡ, ಕಸಾಪ ಸದಸ್ಯರಾದ ವೆಂಕಟೇಶ್, ಮುರಳೀಧರ್, ಜೀವಿ ಗೋವಿಂದ್, ಮಂಜುನಾಥ್, ಬೋರೇಗೌಡ, ಮಾದಲಗೆರೆ ನಂಜೇಗೌಡ, ಪುಟ್ಟರಾಜು, ಭಾರತಿ ಪುರುಷೋತ್ತಮ್ ಹಾಗೂ ಇತರರು ಇದ್ದರು.