ಚನ್ನರಾಯಪಟ್ಟಣ: ರಾಷ್ಟ್ರೀಕೃತ ಬ್ಯಾಂಕ್ ಮಾದರಿಯಲ್ಲಿಯೇ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯರು ಹಾಗೂ ಸಾರ್ವಜನಿಕರು ಠೇವಣಿ ಇರಿಸಿ ಒಡವೆ ಮೇಲೆ ಸಾಲ ಪಡೆಯಬಹುದು ಎಂದು ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎನ್. ಹರೀಶ್ ಹೇಳಿದರು.
ತಾಲ್ಲೂಕಿನ ಹಿರೀಸಾವೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಎಚ್.ಜೆ.ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಇದರಿಂದ ಸಂಸ್ಥೆಯ ಅಭಿವೃದ್ಧಿಗೆ ಸಹಕಾರವಾಗಲಿದೆ ಎಂದರು.
ಸಂಘವು2024-25ನೇ ಸಾಲಿನಲ್ಲಿ 98ಸಾವಿರ ರೂ. ಲಾಭಗಳಿಸಿದೆ. ಪಡಿತರ, ಗೊಬ್ಬರ ವಿತರಣೆ, ಪಿಗ್ನಿ ಹಾಗೂ ಇತರೆ ವ್ಯವಹಾರಗಳು ಪಾರದರ್ಶಕವಾಗಿ ನಡೆಯುತ್ತಿದೆ. ಆಡಳಿತ ಮಂಡಳಿಯ ಮಾರ್ಗಸೂಚಿಯಂತೆಯೇ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಅಧ್ಯಕ್ಷ ಎಚ್.ಜೆ.ಮಹೇಶ್ ಮಾತನಾಡಿ, ಪಾರದರ್ಶಕ ವ್ಯವಹಾರವಿದ್ದಲ್ಲಿ ಮಾತ್ರ ಯಾವುದೇ ಸಂಘ-ಸಂಸ್ಥೆಗಳು ಪ್ರಗತಿ ಹೊಂದಲು ಸಾಧ್ಯ. ಅಲ್ಲದೆ ಸದಸ್ಯರು ಹಾಗೂ ಸಾರ್ವಜನಿಕರಿಗೂ ನ್ಯಾಯಯುತ ಹಾಗೂ ಕ್ರಮಬದ್ಧವಾಗಿ ಅನುಕೂಲಗಳನ್ನು ಕಲ್ಪಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸಂಘದ ನಿರ್ದೇಶಕ ಕೃಷ್ಣೇಗೌಡ ಮಾತನಾಡಿ, ಮೂರು ತಿಂಗಳಿಗೊಮ್ಮೆ ಅಧ್ಯಕ್ಷರ ಬದಲಾವಣೆಯಿಂದ ಸಂಘಕ್ಕೆ ಹೆಚ್ಚು ಖರ್ಚು ಆಗುತ್ತಿದ್ದೆ. ಪ್ರತಿ ಸಲ ಅಧ್ಯಕ್ಷರ ಚುನುವಾಣೆಗೆ 10ಸಾವಿರ ರೂ. ವೆಚ್ಚವಾಗುತ್ತಿದೆ. ಈ ನಂತರ ಸರಿಪಡಿಸಿಕೊಳ್ಳಬೇಕು ಎಂದರು. ಇದಕ್ಕೆ ನಿರ್ದೇಶಕ ಬೋರಣ್ಣ ಸೇರಿದಂತೆ ಇತರೇ ನಿರ್ದಶಕರು ವಿರೋಧ ವ್ಯಕ್ತಪಡಿಸಿ, ಎಲ್ಲರಿಗೂ ಅಧ್ಯಕ್ಷರಾಗಬೇಕು ಎಂಬ ಆಸೆ ಇರುತ್ತದೆ ಎಂದು ಹೇಳಿದರು.
ಈ ಸಂಘದ ಸದಸ್ಯರಿಗೆ ಹೊರತು ಬೇರೆಯವರಿಗೆ ಎಂಟಿಎಲ್ ಸಾಲ ನೀಡಿರುವುದಕ್ಕೆ ರೈತ ಸಂಘದ ಜಿಲ್ಲಾ ಅಧ್ಯಕ್ಷ ರಘು ವಿರೋಧ ವ್ಯಕ್ತಪಡಿಸಿದರು. ಸಂಘದ ಲಾಭಾಂಶವನ್ನು ಷೇರುದಾರರಿಗೆ ಹಂಚಿಕೆ ಮಾಡವಂತೆ ರವಿಕುಮಾರ್ ಮತ್ತು ಎಚ್.ಜಿ.ಮಂಜುನಾಥ್ ಒತ್ತಾಯಿಸಿದರು. ರಾಷ್ಟ್ರೀಯ ಹಬ್ಬಗಳ ಆಚರಣೆ ಮಾಡುವಾಗ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸುವಂತೆ ಸದಸ್ಯ ರಂಜಿತ್ ಸಲಹೆ ನೀಡಿದರು.
ಲಾಭ, ನಷ್ಟ, ರಸ ಗೊಬ್ಬರ ಮಾರಾಟದ ಸೇರಿದಂತೆ ಇತರೆ ವಿಷಯಗಳ ಬಗ್ಗೆ ದಿವಾಕರ್, ಚಂದ್ರಣ್ಣ, ಕಿರೀಸಾವೆ ನಾಗರತ್ನಮ್ಮ ಇತರೆ ಸದಸ್ಯರು ಚರ್ಚೆ ಮಾಡಿದರು. ನಿರ್ದೇಶಕರಾದ ಬೋರಣ್ಣ, ಬಾಬು ಹಾಗೂ ಸದಸ್ಯರು ಇದ್ದರು.










