ಗೋಕಾಕ್ (ಬೆಳಗಾವಿ ಜಿಲ್ಲೆ): ಕಳೆದೆರಡು ದಿನಗಳಿಂದ ಧಾರಾಕಾರ ಮಳೆ ಮುಂದುವರಿದ ಕಾರಣ ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳು ಉಕ್ಕಿ ಹರಿಯುತ್ತಿವೆ. ಗೋಕಾಕ್ ನಗರದ ಹೊರವಲಯದ ಗೋಕಾಕ್ – ಶಿಂಗಳಾಪುರ ಸೇತುವೆ ಮಂಗಳವಾರ ನಸುಕಿನಲ್ಲಿ ಸಂಪೂರ್ಣ ನದಿ ನೀರಿನಲ್ಲಿ ಮುಳುಗಡೆಯಾಗಿದೆ.
ಸೋಮವಾರ ರಾತ್ರಿಯವರೆಗೂ ಈ ಸೇತುವೆ ಸಂಚಾರಕ್ಕೆ ಮುಕ್ತವಾಗಿತ್ತು. ನದಿಗಳ ಪ್ರದೇಶದಲ್ಲಿ ರಾತ್ರಿ ಹೆಚ್ಚು ಮಳೆಯಾದ ಕಾರಣ ಕೆಲವೇ ಗಂಟೆಗಳಲ್ಲಿ ನೀರು ಸೇತುವೆ ಮೇಲೆ ಹರಿದಿದೆ. ಅಲ್ಲದೇ, ಅಕ್ಕಪಕ್ಕದ ನೂರಾರು ಎಕರೆ ಜಮೀನುಗಳಿಗೂ ನುಗ್ಗಿದೆ.ಇದರಿಂದ ಶಿಂಗಳಾಪುರ ಗ್ರಾಮದ ಗೋಕಾಕ್ ಜತೆಗೆ ಸಂಪರ್ಕ ಕಡಿತಗೊಂಡಿದೆ.
ಅಲ್ಲದೇ ಗೋಕಾಕ್ ಹೊರವಲಯದ ಚಿಕ್ಕೋಳಿ ಸೇತುವೆ ಕೂಡ ಮುಳುಗುವ ಹಂತದಲ್ಲಿದೆ. ಇನ್ನೆರಡು ಅಡಿಯಷ್ಟು ಮಾತ್ರ ಬಾಕಿ ಇದೆ. ಈ ಸೇತುವೆ ಮುಳುಗಿದರೆ ನೀರು ಗೋಕಾಕ್ ನಗರದ ಕೆಲವು ಪ್ರದೇಶಗಳಿಗೆ ನುಗ್ಗುತ್ತದೆ.ನದಿ ತೀರದ ಜನ ಮುಂಜಾಗೃತೆ ವಹಿಸುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.










