ಉಡುಪಿ: ಮಲ್ಪೆ ಬೀಚಲ್ಲಿ ಹಾಸನದ ಯುವಕರು ನೀರುಪಾಲು

Two young men from Hassan who had come for a trip were swept away by the waves.

ಉಡುಪಿ: ಪ್ರವಾಸಕ್ಕೆಂದು ಬಂದಿದ್ದ ಹಾಸನದ ಯುವಕರ ಪೈಕಿ ಇಬ್ಬರು ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗಿದ್ದಾರೆ. ದ್ವಿತೀಯ ಬಿಎ ವಿದ್ಯಾರ್ಥಿ ಮಿಥುನ್ (19) ಎಂಬಾತ ನಾಪತ್ತೆಯಾಗಿದ್ದು, ಈಗಾಗಲೇ ಪದವಿ ಮುಗಿಸಿರುವ ಇನ್ನೋರ್ವ ವಿದ್ಯಾರ್ಥಿ ಶಶಾಂಕ (22) ಎಂಬಾತನ ಸ್ಥಿತಿ ಗಂಭೀರವಾಗಿದ್ದು,ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಸನದಿಂದ ರಾತ್ರಿ7 ಮಂದಿಯ ತಂಡ ಹೊರಟಿದ್ದರು. ಶುಕ್ರವಾರ ಬೆಳಗ್ಗೆ ಮಂಗಳೂರಿನ ಕೊರಗಜ್ಜ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದರು. ಮಧ್ಯಾಹ್ನದ ಊಟ ಮುಗಿಸಿ, ಸಂಜೆ ವೇಳೆ ಮಲ್ಪೆ ಬೀಚ್‌ಗೆ ಆಗಮಿಸಿದ್ದರು. 7 ಮಂದಿಯಲ್ಲಿ ಓರ್ವ ದಡದಲ್ಲಿ ಉಳಿದಿದ್ದು ಉಳಿದ 6 ಮಂದಿ ನೀರಿಗೆ ಇಳಿದು ಆಟವಾಡುತ್ತಿದ್ದರು.

ಇವರಲ್ಲಿ ಮಿಥುನ್ ಮತ್ತು ಶಶಾಂಕ್ ಈಜುತ್ತ ಮುಂದೆ ಹೋಗಿದ್ದಾರೆ. ಈ ವೇಳೆ ಇಬ್ಬರೂ ಬೃಹತ್ ಅಲೆಯ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಶಶಾಂಕ್‌ನನ್ನು ಸ್ಥಳೀಯರು ಸೇರಿದಂತೆ ಈಶ್ವರ ಮಲ್ಪೆ ತಂಡ ರಕ್ಷಿಸಿ, ತಕ್ಷಣ ಆಸ್ಪತ್ರೆಗೆ ದಾಖಲಿಸಿದೆ. ಮತ್ತೋರ್ವ ನಾಪತ್ತೆಯಾಗಿದ್ದು, ಪೊಲೀಸರು, ಮುಳುಗು ತಜ್ಞ ಈಶ್ವರ ಮಲ್ಪೆ ಶೋಧ ಕಾರ್ಯ ನಡೆಸುತ್ತಿದ್ದಾರೆ.