ಅರಸೀಕೆರೆ: ಜಿಲ್ಲೆಯ ಹೇಮಾವತಿ ನದಿ ಮೂಲದಿಂದ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯಡಿ ಮೂರನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಕಾಮಗಾರಿಯಲ್ಲಿ ಗಂಡಸಿ ಹೋಬಳಿಯ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಸಾಕಾರಗೊಳ್ಳಲಿದೆ.
ಯೋಜನೆ ಅನುಷ್ಠಾನಕ್ಕೆ 200 ಕೋಟಿ ಅನುದಾನ ಈಗಾಗಲೇ ಬಿಡುಗಡೆ ಆಗಿದ್ದು, ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ತಾಲೂಕಿನ ಗಂಡಸಿ ಗ್ಯಾಂಡ್ಪೋಸ್ಟ್ ವೃತ್ತವನ್ನು ಸುಮಾರು 7 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗೆ ಇಂದು ಚಾಲನೆ ನೀಡಿ ಮಾತನಾಡಿದ ಅವರು, ವೃತ್ತವನ್ನು ಆಕರ್ಷಕ ರೀತಿಯಲ್ಲಿ ಅಭಿವೃದ್ಧಿ ಪಡಿಸುವುದರ ಜೊತೆಗೆ, ಹ್ಯಾಂಡ್ಪೋಸ್ಟ್ ವೃತ್ತಕ್ಕೆ ಹೈಟೆಕ್ ಸ್ಪರ್ಶ ನೀಡಲಾಗುವುದು ಎಂದರು.
ನಾನು ಗಂಡಸಿ ಹೋಬಳಿಯ ಮಗನಾಗಿದ್ದು, ಈ ಮಣ್ಣಿನ ಹಾಗೂ ನಿಮ್ಮ ಋಣವನ್ನು ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಹೋಬಳಿಯ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜಕೀಯ ಭಿನ್ನಾಭಿಪ್ರಾಯ ಬಿಡುವಂತೆ ಪ್ರತಿಪಕ್ಷಗಳ ಮುಖಂಡರಿಗೆ ಕಿವಿ ಮಾತು ಹೇಳಿದರು.
ಕಾಚೇನಹಳ್ಳಿ ಮೂರನೇ ಹಂತದ ಕಾಮಗಾರಿ ಗಂಡಸಿ ಹೋಬಳಿ ಜನತೆಯ ನೀರಿನ ಬವಣೆ ನೀಗಿಸುವುದರಲ್ಲಿ ಸಂದೇಹವಿಲ್ಲ. ಅದೇ ರೀತಿ ಭದ್ರಾ ಮೇಲ್ದಂಡೆ ಯೋಜನೆ ಬಾಣಾವರ ಹೋಬಳಿ, ಎತ್ತಿನಹೊಳೆ ಯೋಜನೆ ಮೂಲಕ ಕಸಬಾ ಹೋಬಳಿ ಹೀಗೆ ಗ್ರಾಮೀಣ ಭಾಗದ ಪ್ರತಿಯೊಂದು ಹಳ್ಳಿಗಳಿಗೂ ಒಂದಲ್ಲ ಒಂದು ನದಿ ಮೂಲದಿಂದ ನೀರು ಹರಿಸುವ ಕೆಲಸ ಸಾಕಾರ ರೂಪ ಪಡೆದುಕೊಂಡಿದೆ ಎಂದರು.
ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋಬಾಬು ಮಾತನಾಡಿ, ಅಭಿವೃದ್ಧಿ ವಿಷಯಕ್ಕೆ ಸಂಬಂಧಪಟ್ಟಂತೆ ಶಿವಲಿಂಗೇಗೌಡ, ಕ್ರಾಂತಿ ಮಾಡಿದ್ದು, ರಾಜ್ಯದಲ್ಲೇ ಅರಸೀಕೆರೆ ಕ್ಷೇತ್ರ ಮಾದರಿ ವಿಧಾನಸಭಾ ಕ್ಷೇತ್ರವಾಗಿ ರೂಪುಗೊಳ್ಳುತ್ತಿರುವುದರಲ್ಲಿ ಸಂದೇಶವಿಲ್ಲ ಎಂದು ಶಾಸಕರ ಕಾರ್ಯವೈಖರಿ ಶ್ಲಾಘಿಸಿದರು.
ಹೊಸದಾಗಿ ವಿಸ್ತಾರಗೊಳ್ಳುತ್ತಿರುವ ಗಂಡಸಿ ಹ್ಯಾಂಡ್ಪೋಸ್ಟ್ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಪ್ರತಿಷ್ಠಾಪಿಸಿ ಎಂದು ಇದೇ ವೇಳೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ರಾಮಚಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಜಯರಾಂ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಯ್ಯಣ್ಣ, ಮುಖಂಡರಾದ ಮಂಜುರಾಜ್, ಮಲ್ಲೇಶಣ್ಣ, ತಾಪಂ ಮಾಜಿ ಸದಸ್ಯ ಈಶ್ವರಪ್ಪ ಮೊದಲಾದವರಿದ್ದರು.










