ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನ ಭುಜದಲ್ಲಿ ನಿರಂತರ ಮಳೆಯಿಂದ ಭಾರೀ ಮಂಜು ಕವಿದಿದ್ದು ನೆಲ ಜಾರುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರ ಚಾರಣವನ್ನು ಅರಣ್ಯ ಇಲಾಖೆ ಒಂದು ತಿಂಗಳ ಕಾಲ ಸಂಪೂರ್ಣ ಬಂದ್ ಮಾಡಿದೆ.
7 ಕಿ.ಮೀ. ಚಾರಣದ ಮೂಲಕ ಎತ್ತಿನ ಭುಜದ ನೈಸರ್ಗಿಕ ಸೌಂದರ್ಯವನ್ನು ಸವಿಯುತ್ತಿದ್ದ ಪ್ರವಾಸಿಗರಿಗೆ ಈ ನಿರ್ಧಾರ ತಾತ್ಕಾಲಿಕ ನಿರಾಸೆ ತಂದಿದೆ. ಆದರೆ, ಮಳೆ, ಕಾಡುಪ್ರಾಣಿಗಳ ಕಾಟ, ಮತ್ತು ಜಾರುವ ಭೂಪ್ರದೇಶದಿಂದಾಗಿ ಚಾರಣದ ವೇಳೆ ಅನಾಹುತ ಸಂಭವಿಸಿದರೆ ರಕ್ಷಣಾ ಕಾರ್ಯ ಕಷ್ಟಸಾಧ್ಯ ಎಂಬ ಕಾರಣಕ್ಕೆ ಈ ಕ್ರಮ ಅನಿವಾರ್ಯವಾಗಿದೆ. ಈ ಪ್ರದೇಶಕ್ಕೆ ಯಾವುದೇ ವಾಹನಗಳು ತೆರಳದ ಕಾರಣ, ತುರ್ತು ಸಂದರ್ಭದಲ್ಲಿ ರಕ್ಷಣೆಗೆ ತೊಂದರೆಯಾಗಬಹುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಸ್ಥಳೀಯರ ಆಗ್ರಹದ ಮೇರೆಗೆ ಚಾರಣಕ್ಕೆ ತಡೆಯೊಡ್ಡಲಾಗಿದ್ದು, ಎತ್ತಿನ ಭುಜದಲ್ಲಿ ಓರ್ವ ಕಾವಲುಗಾರನನ್ನು ನೇಮಿಸಲು ಅರಣ್ಯ ಇಲಾಖೆಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಇಂದಿನಿಂದ ಒಂದು ತಿಂಗಳ ಕಾಲ ಚಾರಣ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪ್ರವಾಸಿಗರು ಈ ನಿಯಮವನ್ನು ಪಾಲಿಸುವಂತೆ ಇಲಾಖೆ ಮನವಿ ಮಾಡಿದೆ.
–ಕನ್ನಡಪೋಸ್ಟ್ ನ್ಯೂಸ್ ನೆಟ್ವರ್ಕ್, ಚಿಕ್ಕಮಗಳೂರು









