ಹಾಸನ: ಮಗನಿಂದಲೇ ತಂದೆಯ ಬರ್ಬರ ಹತ್ಯೆಗೀಡಾಗಿರುವ ಘಟನೆ ಆಲೂರು ತಾಲ್ಲೂಕಿನ, ಕಡಬಗಾಲ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಚಂದ್ರಶೇಖರ್ (60) ಕೊಲೆಯಾದ ವ್ಯಕ್ತಿ, ಸಚಿನ್ (30) ತಂದೆಯನ್ನೇ ಕೊಲೆ ಮಾಡಿದ ಪಾಪಿ ಪುತ್ರ.
ಡ್ರೈವರ್ ಕೆಲಸ ಮಾಡುತ್ತಿದ್ದ ಸಚಿನ್ ಕಂಠಪೂರ್ತಿ ಕುಡಿದೇ ಮನೆಗೆ ಬರುತ್ತಿದ್ದ. ಬಂದಾಗಲೆಲ್ಲ ಜಮೀನು ಮಾರಾಟ ಮಾಡಿ ತನಗೆ ಲಾರಿ ಕೊಡಿಸುವಂತೆ ತಂದೆ ಜತೆ ಜಗಳವಾಡುತ್ತಿದ್ದ ಎನ್ನಲಾಗಿದೆ.
ನಿನ್ನೆ ರಾತ್ರಿಯೂ ತಂದೆಯೊಂದಿಗೆ ಜಗಳ ಶುರು ಮಾಡಿದ ಸಚಿನ್ ಎಡಮಟ್ಟೆಯಿಂದ (ತೆಂಗಿನಗರಿ ಮಟ್ಟೆ) ತಂದೆಯ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಆಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.










