ಹಾಸನ: ಮದ್ಯದಂಗಡಿಗಳಲ್ಲಿ ದರಪಟ್ಟಿ ಕಡ್ಡಾಯವಾಗಿ ಅಳವಡಿಸಬೇಕು ಎಂದು ಆಗ್ರಹಿಸಲು ಅಬಕಾರಿ ಉಪ ಆಯುಕ್ತರ ಕಚೇರಿಗೆ ಹೋಗಿ ವಾಗ್ವಾದ ನಡೆಸಿದ್ದ ಮದ್ಯಪಾನ ಪ್ರಿಯರ ಸಂಘಟನೆಯ ಆರು ಪದಾಧಿಕಾರಿಗಳ ಮೇಲೆ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿ ನಿನ್ನೆ ನೀಡಿದ್ದ ದೂರು ಸ್ವೀಕರಿಸಿದ್ದ ಪೊಲೀಸರು ಇಂದು ಆರು ಜನರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.
ಅಬಕಾರಿ ಅಧಿಕಾರಿಗಳಿಗೂ ಮೊದಲೇ ಮದ್ಯಪ್ರಿಯರು ತಮ್ಮ ಮೇಲೆ ಅಧಿಕಾರಿಗಳು ದೌರ್ಜನ್ಯ ಎಸಗಿದ್ದಾರೆ ಎಂದು ದೂರು ಸಲ್ಲಿಸಿದ್ದರು.
ಈಗ ಪೊಲೀಸರು ತಮ್ಮ ದೂರನ್ನು ನಿರ್ಲಕ್ಷಿಸಿ, ಪ್ರತಿ ದೂರು ಆಧರಿಸಿ ಎಫ್ ಐ ಆರ್ ದಾಖಲಿಸಿರುವುದನ್ನು ಖಂಡಿಸಿರುವ ಮದ್ಯಪ್ರಿಯ ಸಂಘದವರು, ಅಬಕಾರಿ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.










