ಹಾಸನ: ಜಿಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ತೇಜೋದಯ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಿರಿಯ ಜೀವಿಗಳಿಗೆ ಬೆಂಬಲ ಒದಗಿಸಲಾಯಿತು.
ಸಂಘದ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಆಶ್ರಮಕ್ಕೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ನಿಸ್ವಾರ್ಥ ಸೇವೆ ಮೆಚ್ಚಿದರು. ಆಶ್ರಮದ ನಿರ್ವಾಹಕ ಶ್ರೀ ತೇಜ ಅವರನ್ನು ಅಭಿನಂದಿಸಿ, ಸಂಘದ ಪರವಾಗಿ ಕೈಲಾದ ಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ಆಶ್ರಮದ ಹಿರಿಯ ಜೀವಿಗಳಿಗೆ ಹಣ್ಣು, ಹಂಪಲು ಮತ್ತು ಊಟದ ವ್ಯವಸ್ಥೆ ಮಾಡಲಾಯಿತು. ಇದೇ ವೇಳೆ ಅಧ್ಯಕ್ಷರು ಮಾತನಾಡಿ, ನಮ್ಮ ಸಂಘದ ನಿರ್ದೇಶಕರು ಭವಿಷ್ಯದಲ್ಲಿಯೂ ತಮ್ಮ ಕೈಲಾದಷ್ಟು ಸಹಾಯ ಮುಂದುವರಿಸಬೇಕು ಎಂದು ಕೋರಿದರು.
ಇತ್ತೀಚಿನ ಸ್ವಾರ್ಥ ಪರ ಸಮಾಜದಲ್ಲಿ ಸ್ವಾರ್ಥರಹಿತವಾಗಿ ಸೇವೆ ಸಲ್ಲಿಸುತ್ತಿರುವ ತೇಜ ಅವರ ನಿಸ್ವಾರ್ಥ ಮನೋಭಾವ ಶ್ಲಾಘಿಸಿ ಗೌರವಿಸಲಾಯಿತು. ಅಶ್ರಮಕ್ಕೆ ಹೊಸ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ೨೫ ಸಾವಿರ ಸಹಾಯಧನ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವ ಕಾರ್ಯದರ್ಶಿ ಸತೀಶ್, ನಿರ್ದೇಶಕರಾದ ಸಾವಿತ್ರಮ್ಮ, ದಾಕ್ಷಾಯಿಣಿ, ವರುಣ್ ಕುಮಾರ್, ಸುರೇಶ್, ಕಾರ್ಯದರ್ಶಿ ಪ್ರವೀಣ್, ಹಾಗೂ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪರಮೇಶ್ ಎಂ.ಎನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.










