ಹಾಸನ: ಜಿಲ್ಲೆಯ ಪ್ರತಿಷ್ಠಿತ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಜಟಾಪಟಿಗೆ ಕೊನೆಗೂ ತೆರೆ ಬಿದ್ದಿದೆ. ಡಿಆರ್ ಆದೇಶ ಹಿನ್ನಲೆ ಅಧಿಕೃತವಾಗಿ 5 ವರ್ಷಗಳ ಅವಧಿಗೆ ಚುನಾಯಿತರಾಗಿ ಆಯ್ಕೆಯಾಗಿದ್ದ ಪದಾಧಿಕಾರಿಗಳು ಇಂದು ಮತ್ತೆ ಆಡಳಿತ ಮಂಡಳಿ ಕಚೇರಿ ಪ್ರವೇಶಿಸಿ ಕೆಲಸ-ಕಾರ್ಯ ಶುರು ಮಾಡಿದರು.
ಕೆಲ ದಿನಗಳ ಹಿಂದೆ ಆಡಳಿತ ಮಂಡಳಿಯಲ್ಲಿ ಒಂದಿಷ್ಟು ಗೊಂದಲ ಏರ್ಪಟ್ಟಿದ್ದ ಪರಿಣಾಮ ಆಡಳಿತ ಮಂಡಳಿ ಕಚೇರಿಗೆ ಬೀಗ ಹಾಕಿ ಎರಡೂ ಬಣದವರೂ ಪ್ರವೇಶಿಸದಂತೆ ಪೊಲೀಸರು ನಿರ್ಬಂಧ ಹೇರಿದ್ದರು.
ಇಂದು ಅದು ತೆರವುಗೊಂಡಿದುದ ಪದಾಧಿಕಾರಿಗಳು ಬೀಗ ತೆರೆದು ಕಚೇರಿ ಪ್ರವೇಶಿಸಿದರು. ಈ ವೇಳೆ ಮಾತನಾಡಿದ ಸಂಸ್ಥೆ ಅಧ್ಯಕ್ಷ ಆರ್.ಟಿ.ದ್ಯಾವೇಗೌಡ ಹಾಗೂ ಕಾರ್ಯದರ್ಶಿ ಜಗದೀಶ್ ಚೌಡುವಳ್ಳಿ, ಕಳೆದ ಜ.11 ರಂದು 20 ಜನ ನಿರ್ದೇಶಕರ ಬೆಂಬಲದೊಂದಿಗೆ ಸರ್ವಾನುಮತದಿಂದ 5 ವರ್ಷಗಳ ಅವಧಿಗೆ ನಾವು ಅಧ್ಯಕ್ಷ-ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದೇವೆ.
ಇದುವರೆಗೂ ಸಹಕಾರ ಸಂಘದ ರಿಜಿಸ್ಟ್ರಾರ್ ಅವರಿಂದ ಆಗಲೀ, ನ್ಯಾಯಾಲಯದಿಂದಾಗಲೀ ಅಥವಾ ಸರ್ಕಾರದಿಂದಾಗಲೀ ನಮ್ಮ ಆಡಳಿತ ಮಂಡಳಿ ಪದಚ್ಯತಿಗೊಳಿಸಿರುವುದಾಗಿ ತೀರ್ಪು/ ಆದೇಶ ಅಧಿಕೃತವಾಗಿ ಪ್ರಕಟವಾಗಿಲ್ಲ ಎಂದರು.
ಹಿಂದೆ ಸ್ವಯಂ ಘೋಷಿತ ಅಧ್ಯಕ್ಷ ಎಂದು ಬಿಂಬಿಸಿಕೊಂಡಿದ್ದ ಬಿ.ಆರ್.ಗುರುದೇವ್ ಅವರಿಗೆ ಹಾಸನ ಸಹಕಾರ ಸಂಘಗಳ ಉಪ ನಿಬಂಧಕರು, 13 ಜನ ನಿರ್ದೇಶಕರಿರುವ ತಂಡ ಅಧಿಕಾರ ನಡೆಸಬಹುದೆಂದು ಅಭಿಪ್ರಾಯಿಸಿ ಹಿಂಬರಹ ನೀಡಿತ್ತು. ಅದನ್ನೇ ಆದೇಶವೆಂದು ತಪ್ಪಾಗಿ ಅರ್ಥೈಸಿಕೊಂಡಿದ್ದ ಗುರುದೇವ್ ಅವರು, ನಾವು ಅಧಿಕಾರ ಸ್ವೀಕಾರ ಮಾಡುತ್ತಿದ್ದೇವೆಂದು ಸಂಘದ ಕಚೇರಿ ಬಳಿ ಬಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ನಂತರ ಅವರಿಗೆ ಈ ಬಗ್ಗೆ ಮನವರಿಕೆಯಾಗಿದ್ದು, ಸಹಕಾರ ಇಲಾಖೆ ಉಪನಿಬಂಧಕರಿಗೆ ಅಭಿಪ್ರಾಯವನ್ನು ಆದೇಶ ಎಂದು ಮಾರ್ಪಾಡು ಮಾಡಿ ನೀಡುವಂತೆ ಮನವಿ ಸಲ್ಲಿಸಿದ ವೇಳೆ, ಉಪ ನಿಬಂಧಕರು ಸದರಿ ವಿಷಯ ಸಂಬಂಧ ನಿರ್ದೇಶಕರಿಗೆ ನಿರ್ದೇಶನ ನೀಡುವ ಅಥವಾ ಆದೇಶ ಮಾಡುವ ಯಾವುದೇ ಶಾಸನ ಬದ್ಧ ಅವಕಾಶ ಹಾಗೂ ಕಾನೂನು ರೀತ್ಯಾ ಮುಂದಿನ ಕ್ರಮ ಕೈಗೊಳ್ಳುವ ಅಧಿಕಾರ ನಮಗೆ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಈ ಹಿನ್ನಲೆ ಕಾಲೇಜಿನ ಶೈಕ್ಷಣಿಕ ಹಿತ ದೃಷ್ಟಿಯಿಂದ ಚುನಾಯಿತ ಆಡಳಿತ ಮಂಡಳಿ ಇಂದಿನಿಂದ ಕಾರ್ಯಭಾರ ಪ್ರಾರಂಭಿಸಿದ್ದೇವೆ ಎಂದರು.ನ್ಯಾಯಾಲಯದಲ್ಲಿ ಪ್ರಕರಣ ಇರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ನಮ್ಮ ಆಡಳಿತ ಮಂಡಳಿ ಯನ್ನು ಅಧಿಕಾರದಲ್ಲಿ ಮುಂದುವರೆಸುವಂತೆ ಈಗಾಗಲೇ ಹಾಸನದ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಾವೇ ದಾವೆ ಹೂಡಿದ್ದು, ಅದು ವಿಚಾರಣೆ ಹಂತದಲ್ಲಿದೆ. ಒಂದು ವೇಳೆ ನ್ಯಾಯಾಲಯ ಅಥವಾ ರಿಜಿಸ್ಟಾçರ್ ಅಥವಾ ಸರ್ಕಾರದಿಂದ ಆದೇಶ ಬಂದಲ್ಲಿ ತಲೆಬಾಗುತ್ತೇವೆ ಎಂದರು.










