ಬೇಲೂರು :ಪಟ್ಟಣದ ಸ್ವಚ್ಛತೆ ಮತ್ತು ಆರೋಗ್ಯವಂತ ಸಮಾಜವನ್ನು ಕಟ್ಟುವಲ್ಲಿ ಪೌರ ಕಾರ್ಮಿಕರ ಸೇವೆ ಅತ್ಯಂತ ಶ್ರೇಷ್ಠವಾಗಿದೆ. ಪೌರ ಕಾರ್ಮಿಕರು ಕಾಯಕಯೋಗಿಗಳು, ಪ್ರತಿದಿನ ಮುಂಜಾನೆ ಪಟ್ಟಣದ ಪ್ರತಿಯೊಂದು ರಸ್ತೆ ಮತ್ತು ಮಾರುಕಟ್ಟೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಪ್ರತಿನಿತ್ಯ ಮಾಡುತ್ತಿರುವ ಸ್ವಚ್ಛತೆಯ ಕಾರ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ ಎ.ಆರ್ ಅಶೋಕ್ ಹೇಳಿದರು.
ಇಂದು ಪುರಸಭಾ ಕಛೇರಿಯಲ್ಲಿ ಪೌರಕಾರ್ಮಿಕರಿಗೆ ನಮಸ್ತೆ ಯೋಜನೆಯಡಿ ಪಿ.ಪಿ.ಟಿ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಪಟ್ಟಣದ ಸ್ವಚ್ಛತೆಗೆ ಪೌರ ಕಾರ್ಮಿಕರ ಕೊಡುಗೆ ವಿಶೇಷವಾಗಿದೆ.
ತಮ್ಮ ಆರೋಗ್ಯ ಮತ್ತು ಕುಟುಂಬದ ನಿರ್ವಹಣೆಯನ್ನು ತ್ಯಾಗ ಮಾಡಿ ಸಮಾಜದ ಆರೋಗ್ಯಕ್ಕಾಗಿ ಚಳಿ ಗಾಳಿ ಮಳೆ ಲೆಕ್ಕಿಸದೆ ಪ್ರತಿದಿನ ಕಾರ್ಯ ನಿರ್ವಹಿಸುತ್ತಾರೆ.
ಪೌರಕಾರ್ಮಿಕರ ಸೇವೆಯನ್ನು ಅತ್ಯಂತ ಶ್ರೇಷ್ಠವಾದದ್ದು, ಏಕೆಂದರೆ ಅವರು ಮಾಡುವ ತ್ಯಾಗದ ಮನೋಬಾವನೆ ಇನ್ನು ಯಾವುದೇ ವರ್ಗದ ಕಾರ್ಮಿಕರಿಗೆ ಬರಲು ಸಾಧ್ಯವಿಲ್ಲ. ಅನೇಕ ವರ್ಷಗಳಿಂದ ಪೌರಕಾರ್ಮಿಕರು ಹೊರಗುತ್ತಿಗೆ ಆಧಾರದ ಮೇಲೆ ಜೀವನದ ಭದ್ರತೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಬಸವರಾಜು ಟಾಕಪ್ಪ ಶಿಗ್ಗಾವಿ, ಆರೋಗ್ಯಾಧಿಕಾರಿ ಲೋಹೀತ್, ಆರ್.ಐ ಲಕ್ಷಣ, ಕರ ವಸೂಲಿಗಾರರಾದ ಜಯರಾಮ್, ಸಲ್ಮಾನ್, ಪೃಥ್ವಿ, ನಟರಾಜ್ ಸೇರಿದಂತೆ ಕಛೇರಿ ಸಿಬ್ಬಂದಿಗಳು ಹಾಜರಿದ್ದರು.










