ಸಕಲೇಶಪುರ (Sakaleshpura): ಕಾಡಾನೆಗಳ ಓಡಾಟ ಹೆಚ್ಚಾಗಿರುವ ವಡೂರು-ಕಿರುಹುಣಸೆ ರಸ್ತೆಯ ಇಕ್ಕೆಲೆಗಳಲ್ಲಿ ಬೆಳೆದಿದ್ದ ಕಳೆಗಿಡ, ಲಂಟಾನ ಪೊದೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಇಂದು ಸ್ಥಳೀಯರ ಸಹಕಾರದೊಂದಿಗೆ ತೆರವುಗೊಳಿಸಿದರು.

ಅರಣ್ಯ ಇಲಾಖೆ ಸಕಲೇಶಪುರ ವಲಯ ವ್ಯಾಪ್ತಿಯ ವಡೂರು-ಕಿರುಹುಣಸೆ ಮಾರ್ಗದಲ್ಲಿ ಆನೆಗಳು ರಸ್ತೆ ಬದಿಯಲ್ಲಿ ನಿಂತಿದ್ದರೂ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಕಾಣಿಸದಷ್ಟು ದಟ್ಟ ಗಿಡಗಂಟಿಗಳು ಬೆಳೆದಿದ್ದವು. ಈ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದರು.

ಇಂದು ಸಕಲೇಶಪುರ ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ಸ್ಥಳೀಯ ಕಾಫಿ ಬೆಳೆಗಾರ ಸಂತೋಷ್ ಅವರ ಸಹಕಾರದೊಂದಿಗೆ ಕಳೆಗಿಡ,ಲಂಟಾನಗಳನ್ನು ತೆರವುಗೊಳಿಸಿದರು.
ಈ ಕ್ರಮದಿಂದ ಕಾಡಾನೆಗಳ ಚಲನವಲನವನ್ನು ವಾಹನ ಸವಾರರು ಮತ್ತು ಗ್ರಾಮಸ್ಥರಿಗೆ ಸುಲಭವಾಗಿ ಗಮನಿಸಲು ಅನುಕೂಲವಾಗಿದೆ. ಇದರಿಂದ ಸಂಚಾರದ ಸುರಕ್ಷತೆಯೂ ಹೆಚ್ಚಿದೆ.










