ಹಾಸನ, ಜುಲೈ 06, 2025: ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವಿನ ಸರಣಿ ಮುಂದುವರಿದಿದ್ದು, ಇಂದು ಮತ್ತೊಂದು ದುರಂತ ಸಂಭವಿಸಿದೆ. ಬೆಂಗಳೂರಿನ ಜಯನಗರದ ನಿವಾಸಿಯಾಗಿದ್ದ ರಂಗನಾಥ್ (57) ಎಂಬುವರು ಹಾಸನ ನಗರದ ಡಿಸಿ ಕಚೇರಿ ಎದುರು ಚಲಿಸುತ್ತಿದ್ದ ಕಾರಿನಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ರಂಗನಾಥ್ ಅವರು ತಮ್ಮ ಪತ್ನಿ ಮತ್ತು ಪುತ್ರಿಯೊಂದಿಗೆ ಮಂಗಳೂರಿಗೆ ಟ್ರಿಪ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಾಸಾಗುತ್ತಿದ್ದರು. ರಂಗನಾಥ್ ಅವರ ಪುತ್ರಿಯೇ ಕಾರನ್ನು ಚಲಾಯಿಸುತ್ತಿದ್ದರು. ಹಾಸನದ ಡಿಸಿ ಕಚೇರಿ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ರಂಗನಾಥ್ಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಕಾರನ್ನು ನಿಲ್ಲಿಸಿದ ರಂಗನಾಥ್ ಅವರ ಪುತ್ರಿ,
ಸಾರ್ವಜನಿಕರ ಸಹಕಾರ ಪಡೆದು ಅವರನ್ನು ತಕ್ಷಣವೇ ಆಟೋದಲ್ಲಿ ಸಮೀಪದ ಹಿಮ್ಸ್ ಆಸ್ಪತ್ರೆಗೆ ಕರೆದೊಯ್ದರಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ರಂಗನಾಥ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಹೃದಯಾಘಾತ ಸಂದರ್ಭದಲ್ಲಿ ರಂಗನಾಥ ಅವರ ಕುಟುಂಬ ಸದಸ್ಯರ ರೋಧನೆ ಕರುಳು ಚುರುಕ್ ಅನ್ನುವಂತಿತ್ತು.










