ಚನ್ನರಾಯಪಟ್ಟಣ: ಪುಂಡ–ಪೋಕರಿಗಳ ಬಗ್ಗೆ ಎಚ್ಚರ ವಹಿಸಿ–ವಿದ್ಯಾರ್ಥಿಗಳಿಗೆ ಪಿಎಸ್ಐ ರೂಪದೇವಿ ಬಿರಾದರ್ ಸಲಹೆ

PSI Roopdevi Biradar of Hirisave Police Station said that the menace of hooligans is increasing day by day and girls should be very aware.

ಚನ್ನರಾಯಪಟ್ಟಣ:  ಪುಂಡ-ಪೋಕರಿಗಳ ಹಾವಳಿಗೆ ಕಡಿವಾಣ ಹಾಕಲು ಮತ್ತು  ಅವರಿಂದ ಕಿರುಕುಳಕ್ಕೆ ಒಳಗಾಗದಿರಲು ಹೆಣ್ಣು ಮಕ್ಕಳು ಸಾಕಷ್ಟು ಜಾಗೃತಿ ವಹಿಸಬೇಕು ಎಂದು ಹಿರೀಸಾವೆ ಪೊಲೀಸ್ ಠಾಣೆಯ ಪಿಎಸ್ಐ ರೂಪದೇವಿ ಬಿರಾದರ್ ಹೇಳಿದರು.

ತಾಲ್ಲೂಕಿನ ಹಿರೀಸಾವೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಪಿಎಂ ಶ್ರೀ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪೋಕ್ಸೊ ಕಾಯ್ದೆ ಹಾಗೂ ಇತರ ಜಾಗೃತಿ ವಿಷಯಗಳ ಬಗ್ಗೆ ಅರಿವು ಮೂಡಿಸಿದರು.

ರಸ್ತೆಯಲ್ಲಿ ಓಡಾಡುವಾಗ ಅಪರಿಚಿತರಿಂದ ಅಥವಾ ಶಾಲೆಗಳಲ್ಲಿ ಸಹಪಾಠಿಗಳು ಇಲ್ಲವೇ ಇತರರಿಂದ ಅಸಭ್ಯ ವರ್ತನೆ ಕಂಡು ಬಂದಲ್ಲಿ ಕೂಡಲೇ ಶಿಕ್ಷಕರಿಗೆ ತಿಳಿಸಬೇಕು. ಅವಕಾಶವಿದ್ದಲ್ಲಿ 1098ಗೆ ಕರೆ ಮಾಡಬೇಕು. ಇಲ್ಲವೇ ಮನೆಗೆ ತೆರಳಿದ ತಕ್ಷಣ ಪಾಲಕರ ಗಮನಕ್ಕೆ ತರಬೇಕು. ಇದರಿಂದ ತಕ್ಷಣ ಕ್ರಮ ಕೈಗೊಂಡು ಸಂಭಾವ್ಯ ಅಪಾಯದಿಂದ ರಕ್ಷಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಶೈಕ್ಷಣಿಕ ಹಂತದಲ್ಲಿ ಓದು ಹಾಗೂ ಮುಂದಿನ ಸಾಧನೆಯ ಬಗ್ಗೆ ಮಾತ್ರ ಚಿಂತನೆ ಮಾಡಬೇಕು. ನಂತರ ಎಲ್ಲವೂ ತಾನಾಗಿಯೇ ಸಿಗಲಿದೆ. ಆದರೆ ವ್ಯಾಮೋಹಕ್ಕೆ ಒಳಗಾಗಿ ದಾರಿ ತಪ್ಪಿದರೆ ಮತ್ತೊಮ್ಮೆ ಜೀವನವನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮ ಬದುಕು ರೂಪಿಸುವಲ್ಲಿ ಪರಿಶ್ರಮ ಪಡುತ್ತಿರುವ ಪಾಲಕರ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು. ನಮ್ಮಿಂದ ಅವರ ಆಸೆ ಹಾಗೂ ನಂಬಿಕೆಗೆ ದ್ರೋಹ ಆಗಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಟಿವಿ ವೀಕ್ಷಣೆಯಿಂದ ಒಂದಷ್ಟು ಮನರಂಜನೆ ಸಿಗಬಹುದು. ಹಾಗೆಯೇ ಶೈಕ್ಷಣಿಕ ವ್ಯವಸ್ಥೆಗೆ ಮೊಬೈಲ್ ಬಳಕೆ ಅಗತ್ಯ. ಆದರೆ ಮುಂದುವರಿದಂತೆ ಹೆಚ್ಚು ಮೊಬೈಲ್ ಗೀಳು ಅಂಟಿಸಿಕೊಂಡರೆ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಕಷ್ಟವಾಗಲಿದೆ. ಶಿಕ್ಷಣವನ್ನು ನಂಬಿ ಮುನ್ನಡೆದರೆ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಸಲಹೆ ನೀಡಿದರು.

 ಮಕ್ಕಳು ರೀಲ್ಸ್ ಮಾಡಿ ಅಪ್ಲೋಡ್ ಮಾಡುವುದು ಅಥವಾ ಪೋಟೋ ಹರಿಬಿಡುವುದು ಒಳ್ಳೆಯ ಬೆಳವಣಿಗೆಯಲ್ಲ. ಅಪರಿಚಿತರು ಭಾವಚಿತ್ರ, ವಿಡಿಯೋ ದುರ್ಬಳಕೆ ಮಾಡಿಕೊಂಡು ನಿಮ್ಮ ನೆಮ್ಮದಿ ಕಸಿಯುವ ಸಾಧ್ಯತೆ ಇದೆ. ಅಥವಾ  ಬ್ಲಾಕ್ ಮೇಲ್ ಮಾಡುವ ಸಾಧ್ಯತೆಗಳ ಬಗ್ಗೆ ಎಚ್ಚರವಾಗಿರಬೇಕು ಎಂದರು.

18 ವರ್ಷ ತುಂಬುವ ಮೊದಲೇ ವಾಹನ ಚಾಲನೆ ಮಾಡುವುದು ಅಪರಾಧವಾಗಿದ್ದು ದಂಡ ಕಟ್ಟಬೇಕಾಗುತ್ತದೆ. 18 ವಯಸ್ಸು ದಾಟಿದ ನಂತರ ಚಾಲನಾ ಪರವಾನಗಿ, ವಿಮೆ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಪಡೆದುಕೊಳ್ಳಬೇಕು. ದ್ವಿಚಕ್ರ ಸವಾರಿ ವೇಳೆ ಹೆಲ್ಮೆಟ್ ಧರಿಸುವುದರ ಜತೆಗೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು ಅಗತ್ಯ ಎಂದರು.

ಬ್ಯಾಂಕ್ ವ್ಯವಹಾರದಲ್ಲಿ ಸಾಕಷ್ಟು ಎಚ್ಚರಿಕೆ ಇರಬೇಕು. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಬ್ಯಾಂಕಿಂಗ್ ಕಾರಣ ಅಪರಿಚಿತರು ಬ್ಯಾಂಕ್ ಉದ್ಯೋಗಿಗಳಂತೆ ವರ್ತಿಸಿ ಕರೆ ಮಾಡಿ ಓಟಿಪಿ ಪಡೆಯುವ ಮೂಲಕ ಗ್ರಾಹಕರ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ನೀವು ಶ್ರಮವಹಿಸಿ ಕೂಡಿಟ್ಟ ಹಣವನ್ನು ಕ್ಷಣದಲ್ಲಿ ದೋಚಲಿದ್ದಾರೆ. ಅಪರಿಚಿತರಿಂದ ಕರೆ ಬಂದಲ್ಲಿ ಯಾರು ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲವೇ ಹತ್ತಿರದ ಬ್ಯಾಂಕ್ ಶಾಖೆಗೆ ತೆರಳಿ ಮಾಹಿತಿ ಪಡೆಯಬೇಕು. ಗ್ರಾಹಕರು ಎಚ್ಚರಿಕೆ ವಹಿಸುವುದರಿಂದ ಸೈಬರ್ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಬಹುದು ಎಂದರು.

ಪೊಲೀಸ್ ಠಾಣೆ ಹಾಗೂ ಪೋಲಿಸ್ ಅಧಿಕಾರಿಗಳನ್ನು ಕಂಡರೆ ಭಯಪಡುವ ಅಗತ್ಯವಿಲ್ಲ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಇದ್ದು ನಿಮ್ಮ ಸಹಕಾರ ಪಡೆದು ಉತ್ತಮ ಸೇವೆ ನೀಡುವ ಉದ್ದೇಶವಿದೆ. ಯಾವುದೇ ತೊಂದರೆ ಅಥವಾ ಅಪಾಯ ಎದುರಾದಲ್ಲಿ ಕೂಡಲೇ ನಮ್ಮ ಗಮನಕ್ಕೆ ತರಬೇಕು. ಇದರಿಂದ ಎಂತಹ ಕಠಿಣ ಸಮಸ್ಯೆ ಇದ್ದರೂ ನಿಭಾಯಿಸಿ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.

ಮುಖ್ಯಶಿಕ್ಷಕಿ ಉಮಾ, ಸಹ ಶಿಕ್ಷಕ ಧರ್ಮೇಶ್, ಎಎಸ್ಐ ಶ್ರೀನಿವಾಸ್ ಮೂರ್ತಿ, ಮಹಿಳಾ ಕಾನ್ಸ್ಟೇಬಲ್ ವಾಣಿ, ಪೊಲೀಸ್ ಸಿಬ್ಬಂದಿ ವರ್ಗ ಹಾಗೂ ಇತರರು ಇದ್ದರು.

PSI Roopdevi Biradar of Hirisave Police Station said that the menace of hooligans is increasing day by day and girls should be very aware.