ಹಾಸನ: ಬೆಂಗಳೂರಿನ ದೇವನಹಳ್ಳಿಯ ವಿಜಯಪುರ ಪಟ್ಟಣದ ಉದ್ಯೋಗಿ ರಾಜೇಶ್ ಹಾಗೂ ಶರ್ಮಿಳಾ ದಂಪತಿ ಪುತ್ರ ಮಗ ಪ್ರಜ್ವಲ್ ಅವರು ಬಹುಮುಖ ಪ್ರತಿಭೆಯಾಗಿದ್ದು ನೂರಾರು ಕಿಲೋಮೀಟರ್ ಗಟ್ಟಲೆ ಸೈಕ್ ಸವಾರಿ ಮಾಡುವ ಮೂಲಕ ವಿಶೇಷ ಸಾಧನೆ ಮಾಡುವ ಹಂಬಲ ಹೊಂದಿದ್ದಾರೆ.
ಇತ್ತೀಚೆಗೆ ಬೇಲೂರಿಗೆ ಬಂದಿದ್ದ ಪ್ರಜ್ವಲ್ನನ್ನು ಹಾಸನ ಜಿಲ್ಲಾ ಕ್ರೀಡಾಂಗಣದ ಕ್ರೀಡಾಪಟುಗಳ ಆದ ಮನೋಜ್ ಕುಮಾರ್, ಲಕ್ಕಿ, ಹರ್ಷ, ಚೇತನ್, ರವಿತೇಜ್, ಯೋಗೇಶ್, ಸುಜೀತ್ ಹಾಗೂ ತಂಡದವರು ಆತ್ಮೀಯವಾಗಿ ಅಭಿನಂದಿಸಿ, ಸನ್ಮಾನಿಸಿ ಅವರ ಮುಂದಿನ ಸಾಧನೆಯ ಪಯಣಕ್ಕೆ ಶುಭ ಹಾರೈಸಿದರು.
ಇಂದಿನ ದಿನಗಳಲ್ಲಿ ವಿವಿಧ ರೀತಿಯ ದುಶ್ಚಟ ಇತ್ಯಾದಿಯಾಗಿ ಯುವ ಪೀಳಿಗೆ ದಾಸರಾಗುತ್ತಿರುವುದು ಸಾಮಾನ್ಯವಾಗಿದೆ. ಕಲೆ, ವಿದ್ಯೆ, ಸಾಧನೆ ಕಡೆಗೆ ಗಮನ ಹರಿಸದೆ, ತಾವಂದುಕೊಂಡ ಹಾದಿಯಲ್ಲೇ ಸಾಗುವ ಯುವ ಮನಸ್ಸುಗಳು ಈಗ ಹೆಚ್ಚಾಗಿವೆ. ಇಂಥ ಸನ್ನಿವೇಶದಲ್ಲಿ ವಿದ್ಯಾಭ್ಯಾಸ ಜೊತೆ ಜೊತೆಗೆ ಕಲೆ, ಸಾಧನೆ ಮತ್ತಿತರ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹೆತ್ತವರಿಗೆ, ಗುರುಗಳಿಗೆ ಹಾಗೂ ರಾಜ್ಯಕ್ಕೆ ಕೀರ್ತಿ ತರುವತ್ತ ಪ್ರಜ್ವಲ್ ಹೆಜ್ಜೆ ಹಾಕುತ್ತಿದ್ದಾನೆ.
ಇತ್ತೀಚೆಗೆ ಬೆಂಗಳೂರಿನಿಂದ ಹೊರಟು ತುಮಕೂರು ಹಾಗೂ ಹಾಸನ ಮಾರ್ಗವಾಗಿ ಬೇಲೂರಿಗೆ ಸರಿ ಸುಮಾರು 280ಕಿ.ಮೀ ಸೈಕಲ್ನಲ್ಲಿ ಸಾಗಿ ಬಂದು ಕರ್ನಾಟಕ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರು ಮುದ್ರಿಸಲು ಪ್ರಜ್ವಲ್ ಅಣಿಯಾಗಿದ್ದಾನೆ. ಈತನ ಆಸೆ ಕೈಗೂಡಲಿ ಎಂಬುದು ಪ್ರತಿಯೊಬ್ಬರ ಆಸೆಯಾಗಿದೆ.










