ಮೂಡಬಿದ್ರೆ : ಇತ್ತೀಚಿನ ಕೆಮ್ಮಿನ ಸೀರಪ್ ದುರಂತಕ್ಕೆ ಸರ್ಕಾರ ತೋರಿಸಿರುವ ನಿರ್ಲಕ್ಷ್ಯ ಮನೋಭಾವದ ವಿರುದ್ಧ ವೈದ್ಯ ಡಾ. ಬಿ. ಸದಾನಂದ ನಾಯಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪ್ರತಿ ಸಲದಂತೆ ಸರ್ಕಾರ ‘ಕುದುರೆ ಓಡಿ ಹೋದ ಮೇಲೆ ಬಾಗಿಲು ಮುಚ್ಚುವ’ ರೀತಿಯಲ್ಲಿ ವರ್ತಿಸುತ್ತಿದೆ.
ಕೆಮ್ಮಿನ ಸೀರಪ್ ಬ್ರ್ಯಾಂಡ್ ನಿಷೇಧ ಮತ್ತು ಕೆಲವು ಬಂಧನೆಗಳು ಕೇವಲ ರಾಜಕೀಯ ನಾಟಕ, ಜನರ ಕಣ್ಣಿಗೆ ಧೂಳು ಎರಚುವ ಕ್ರಮ ಮಾತ್ರ,” ಎಂದು ಅವರು ತಿಳಿಸಿದ್ದಾರೆ.
ಅವರು ನೀಡಿರುವ ಹೇಳಿಕೆಯಲ್ಲಿ, “ಔಷಧದ ಉತ್ಪಾದನೆ ಮತ್ತು ಮಾರಾಟದ ಮೇಲಿನ ನಿಯಂತ್ರಣವಿಲ್ಲದ ವೈದ್ಯರನ್ನು ಬಂಧಿಸುವ ಬದಲು, ಆ ಕೆಮ್ಮಿನ ಸೀರಪ್ ಮಾರಾಟಕ್ಕೆ ಅನುಮತಿ ನೀಡಿದ ಡ್ರಗ್ ಕಂಟ್ರೋಲ್ ಅಧಿಕಾರಿಗಳು ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವರು ತಮ್ಮ ಕರ್ತವ್ಯವನ್ನು ನಿರ್ಲಕ್ಷಿಸಿದರೆ ಅಥವಾ ಅಸಂಯಮಿತ ಔಷಧಗಳಿಗೆ ಮಾರುಕಟ್ಟೆ ದಾರಿ ತೆರೆಯಲು ಸಹಕರಿಸಿದರೆ, ಅದು ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್, 1940 ಕಾಯ್ದೆಯ ನೇರ ಉಲ್ಲಂಘನೆಯಾಗುತ್ತದೆ ಮತ್ತು ಅನೇಕ ಜೀವಗಳನ್ನು ಅಪಾಯಕ್ಕೆ ಒಳಪಡಿಸುತ್ತದೆ,” ಎಂದು ಡಾ. ನಾಯಕ್ ತಿಳಿಸಿದ್ದಾರೆ.
ಅವರು ಸರ್ಕಾರವನ್ನು ಉದ್ದೇಶಿಸಿ “ಸಮಗ್ರ ತನಿಖೆ ನಡೆಸಿ ಹೊಣೆಗಾರ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜನರ ಆರೋಗ್ಯದೊಂದಿಗೆ ಆಟವಾಡುವವರ ವಿರುದ್ಧ ಕಠಿಣ ಶಿಕ್ಷೆ ನೀಡದಿದ್ದರೆ ಇಂತಹ ದುರಂತಗಳು ಪುನರಾವರ್ತನೆ ಆಗುತ್ತವೆ,” ಎಂದು ಎಚ್ಚರಿಸಿದ್ದಾರೆ










